ಬೀದರ್: ರಾಜ್ಯದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಘಟಕಗಳಿಗೆ ನೀಡಲಾಗುವ ಬಂಡವಾಳ ಹೂಡಿಕೆ ಸಹಾಯಧನವನ್ನು ಹಿಂದಿನ ಕೈಗಾರಿಕೆ ನೀತಿ ವಿಧಾನದಲ್ಲೇ ಇಲ್ಲವೇ ಒಂದು ಅಥವಾ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
2020-25ರ ಹೊಸ ಕೈಗಾರಿಕೆ ನೀತಿಯಲ್ಲಿನ ಪ್ರೋತ್ಸಾಹ ಬಂಡವಾಳ ಹೂಡಿಕೆ ಸಹಾಯಧನ ಬಿಡುಗಡೆ ವಿಧಾನ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆ ಘಟಕದ ವಾರ್ಷಿಕ ವಹಿವಾಟು ಆಧರಿಸಿ ಪ್ರತಿ ವರ್ಷ ಶೇ 20 ರಷ್ಟು ಸಹಾಯಧನ ಬಿಡುಗಡೆ ಮಾಡುವುದರಿಂದ ಕೈಗಾರಿಕೆಗೆ ಹಣಕಾಸು ಸಂಸ್ಥೆ ಮೂಲಕ ಪಡೆದ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಹೊರೆ ಹೆಚ್ಚಾಗಲಿದೆ. ಬೆಳವಣಿಗೆ ಹಂತದಲ್ಲಿ ವಹಿವಾಟು ಆಧರಿಸಿ ಸಹಾಯಧನ ಬಿಡುಗಡೆ ಮಾಡಿದ್ದಲ್ಲಿ ಕೆಲ ಕೈಗಾರಿಕೆಗಳು ಮಂಜೂರಾದ ಮೊತ್ತ ಮಾತ್ರ ಪಡೆದರೆ, ಇನ್ನು ಕೆಲವು ಮಂಜೂರಾದ ಮೊತ್ತದ ಶೇ 20 ರಿಂದ ಶೇ 50 ರಷ್ಟನ್ನು ಪಡೆಯುತ್ತವೆ. ಇದರಿಂದ ರೋಗಗ್ರಸ್ತ ಕೈಗಾರಿಕೆಗಳಾಗಿ ಮಾರ್ಪಡುತ್ತವೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.