ಭಾಲ್ಕಿ: ಪಟ್ಟಣದ ಎಲ್ಲ ಅಂಗಡಿ ಮುಂಗ್ಗಟ್ಟುಗಳ ನಾಲಫಲಕ ಹಾಗೂ ಬ್ಯಾನರ್ಗಳ ಮೇಲೆ ಶೇ 60ರಷ್ಟು ಕನ್ನಡ ಇರಬೇಕು ಎಂದು ಸರ್ಕಾರದ ಆದೇಶವಿದ್ದರೂ ಅದನ್ನು ಸಮರ್ಪಕವಾಗಿ ಅನುಸರಿಸುತ್ತಿಲ್ಲ. ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ಬಿ.ಅಮರೇಶ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ ಶೇರಿಕಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರಮುಖ ವೃತ್ತ, ಮುಖ್ಯ ರಸ್ತೆಗಳಲ್ಲಿ ಅನ್ಯಭಾಷೆಯ ನಾಮಫಲಕ ದೊಡ್ಡ ಅಕ್ಷರದಲ್ಲಿ ಬರೆಸಿರುವುದು ಕಂಡುಬರುತ್ತಿದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪ್ರಯೋಜನ ಆಗಿಲ್ಲ. ಕೂಡಲೇ ವಿವಿಧೆಡೆ ಇರುವ ಅನ್ಯಭಾಷೆಯ ನಾಮಫಲಕ ತೆರವುಗೊಳಿಸಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಶಿವರಾಜ ಪಟ್ನೆ, ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ದೇವಿದಾಸ ಸೂರ್ಯವಂಶಿ, ಕಾರ್ಯದರ್ಶಿ ರಾಜಕುಮಾರ ದುರ್ವೆ, ವಿದ್ಯಾರ್ಥಿ ಘಟಕದ ಪದಾಧಿಕಾರಿಗಳಾದ ಆಕಾಶ ಮೇತ್ರೆ, ಸಚಿನ್ ಮೇತ್ರೆ, ಶ್ರೀಕಾಂತ ಮತ್ತು ವಿನಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.