ಬಸವಕಲ್ಯಾಣ:`ಸರ್ಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಜಾಣ ನಡೆ ನಡೆಯುತ್ತಿದೆ. ಇದರಿಂದ ದಲಿತರ ಮೀಸಲಾತಿ ಮೊಟಕಾಗುವ ಭಯವಿದೆ' ಎಂದು ಸಾಹಿತಿ ಡಾ.ಮೋಹನರಾಜ್ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಬೇಲೂರನ ಶರಣ ಉರಿಲಿಂಗ ಪೆದ್ದಿ ಮಠದಲ್ಲಿ ಶಿವಲಿಂಗೇಶ್ವರರ 51 ನೇ ಸ್ಮರಣೋತ್ಸವ ಪ್ರಯುಕ್ತ ಭಾನುವಾರ ನಡೆದ ಶೋಷಿತರ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಶೋಷಿತರು ಶೇ 85ರಷ್ಟು ಇದ್ದಾರೆ. ಆದರೂ ಅವರ ಹಿತಕ್ಕಾಗಿ ಯಾರೂ ಏನೂ ಮಾಡುತ್ತಿಲ್ಲ. ಆದ್ದರಿಂದ ಎಲ್ಲರೂ ಎಚ್ಚೆತ್ತುಕೊಂಡು ಸಾಮಾಜಿಕ ನ್ಯಾಯ ನೀಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದೆ’ ಎಂದರು.
ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಘಂಟೆ, ಮಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ, ಡಾ.ಗವಿಸಿದ್ದಪ್ಪ ಪಾಟೀಲ, ಜೈಭೀಮ ಹೊಳಕೇರಿ, ಕಂಟೆಪ್ಪ ಮದರಗಾಂವ್, ದಶವಂತ ಬಂಡೆ ಮಾತನಾಡಿದರು.
ಸಾಹಿತಿ ಡಾ.ವಸುಂಧರಾ ಭೂಪತಿ ಹಾಗೂ ಡಾ.ಮೋಹನರಾಜ್ ಅವರಿಗೆ ಪ್ರಸಕ್ತ ಸಾಲಿನ `ಶರಣ ಉರಿಲಿಂಗಪೆದ್ದಿ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ಡಾ.ಜಯದೇವಿ ಗಾಯಕವಾಡ, ಡಾ.ಅನುರಾಧಾ ಬಾಲಕೃಷ್ಣ ರಾಠೋಡ, ನಾಗಪ್ಪ ನಿಣ್ಣೆ, ಮಹಾಲಿಂಗ ಪಂಚಾಕ್ಷರಿ, ಸುರೇಶ ಮೋರೆ, ನಿತ್ಯಾನಂದ ಮಂಠಾಳಕರ್, ನವನಾಥ ಬೆಳ್ಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.