ಬೀದರ್: 2018ನೇ ಸಾಲಿನಲ್ಲಿ ಸ್ಥಗಿತಗೊಳಿಸಿದ್ದ ರಾಜ್ಯಮಟ್ಟದ ಯುವಜನ ಮೇಳವನ್ನು ಪುನಃ ಬೀದರ್ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ಯುವ ಸಂಘ-ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ
ಜಿಲ್ಲಾ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಕಾರ್ಯವು ನಿಂತುಹೋಗಿದ್ದು ಈ ಹಿಂದಿನಂತೆ ಮುಂದುವರಿಸಬೇಕು.
ಗ್ರಾಮೀಣ ಕ್ರೀಡೋತ್ಸವ ಮುಂದುವರಿಸಬೇಕು. ಯುವ ಚೇತನ, ಯುವ ಪ್ರೇರಣ ಹಾಗೂ ಯುವ ಸಂವಹನ ಕಾರ್ಯಕ್ರಮ ಮುಂದುವರಿಸಬೇಕು ಎಂದು ಆಗ್ರಹಿಸಿದೆ.
ಯುವಜನ ಮೇಳ ಹಾಗೂ ಯುವನೋತ್ಸವ ಕಾರ್ಯಕ್ರೆಮಗಳಿಗೆ ಯುವಕರಿಗೆ ಅನುಕೂಲವಾಗುವ ಜಿಲ್ಲಾ ಮಟ್ಟದ ಜನಪದ ಕಲೆಗಳ ತರಬೇತಿ ಶಿಬಿರ ಆಯೋಜಿಸಬೇಕು. ನಮ್ಮೂರ ಶಾಲೆಗೆ ನಮ್ಮೂರ ಯುವಜನರು ಎಂಬ ಕಾರ್ಯಕ್ರಮವನ್ನು ಈ ಮೊದಲಿನಂತೆ ಯುವಕ ಸಂಘಗಳಿಗೆ ನೀಡಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಾಯಿತ ಯುವಕ ಸಂಘಗಳಿಗೆ ಈ ಹಿಂದಿನಂತೆ ಕ್ರೀಡಾ ಉಪಕರಣಗಳನ್ನು ನೀಡಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದೆ.
ರಾಜ್ಯ ರಾಷ್ಟ್ರ ಯುವ ಹಾಗೂ ಕ್ರೀಡಾ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್ಪಾಸ್ ಹಾಗೂ ವಿಮೆ ಸೌಲಭ್ಯ ಕಲ್ಪಿಸಬೇಕು.
ಯುವ ಸಂಘ-ಸಂಸ್ಥೆಗಳನ್ನು ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಬೇಕೆಂಬ ನಿಯಮವನ್ನು ಸಡಿಲಗೊಳಿಸಿ ಈ ಹಿಂದೆನಂತೆ ಕ್ರೀಡಾ ಇಲಾಖೆಯಲ್ಲಿ ನೋಂದಾಯಿಸಿ ಕಾರ್ಯವಟಿಕೆಗಳನ್ನು ಮುಂದುವರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.
ಬೆಂಗಳೂರಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಅವರಿಗೆ ಕರ್ನಾಟಕ ರಾಜ್ಯ ಯುವ ಸಂಘ-ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ ವಿಜಯಕುಮಾರ್ ಸೊನಾರೆ ಗೌರವ ಕಾರ್ಯಧ್ಯಕ್ಷ ಪ್ರಕಾಶ್.ಎಸ್.ಅಂಗಡಿ, ಅಧ್ಯಕ್ಷ ಶಿವಕುಮಾರ್.ಎಚ್.ಎಂ ಹಾಗೂ ಪ್ರಧಾನಕಾರ್ಯದರ್ಶಿ ಫಣೀಂದ್ರಪ್ರಸಾದ ಮನವಿಪತ್ರ ಸಲ್ಲಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.