ಹುಮನಾಬಾದ್: ತಾಲ್ಲೂಕು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಯಲ್ಲಿ ಕ್ಯೂಆರ್ಕೋಡ್ ಸ್ಕ್ಯಾನ್ ಮಾಡುತ್ತಿರುವುದು ಸಮಯ ವ್ಯರ್ಥವಾಗುತ್ತಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ 6 ರೈತ ಸಂಪರ್ಕ ಕೇಂದ್ರಗಳು ಸೇರಿ ವಿಶೇಷವಾಗಿ ವಿವಿಧ ಗ್ರಾಮಗಳಲ್ಲಿ 9 ಕಡೆಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಆದರೆ ರೈತರಿಗೆ ಬೀಜ ವಿತರಣೆ ಮಾಡುವ ಮೊದಲು ಬೀಜದ ಪ್ಯಾಕೇಟ್ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೆಲ ತಾಂತ್ರಿಕ ಸಮಸ್ಯೆಯಿಂದ ಬೀಜ ವಿತರಣೆಯಲ್ಲಿ ಸಮಯ ತೆಗೆದುಕೊಳ್ಳುತ್ತಿದೆ ಎಂಬುದು ರೈತರು ಅಸಮಾಧಾನ.
ರೈತರು ಖರೀದಿಸುವ ಬೀಜದ ಪ್ಯಾಕೇಟ್ ಮೇಲೆ ಕ್ಯೂಆರ್ ಕೋಡ್ ಇದೆ, ಇದನ್ನು ರೈತರ ಎಫ್ಐಡಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಹಾಕಿ ಸ್ಕ್ಯಾನ್ ಮಾಡಿದ ನಂತರ ಕಂಪ್ಯೂಟರ್ನಲ್ಲಿ ನೋಂದಣಿ ಆಗಿ ರೈತರಿಗೆ ರಸೀದಿ ಬರುತ್ತದೆ. ಇದರಿಂದ ಒಬ್ಬ ರೈತರಿಗೆ ಯಾವ ಕಂಪನಿ ಬೀಜ ನೀಡಲಾಗಿದೆ, ಯಾವ ಬೀಜ ನೀಡಲಾಗಿದೆ ಎಂಬುದು ಸೇರಿದಂತೆ ನಿಗದಿತ ಬೆಲೆ ದಾಖಲಾಗಿ, ಈ ಕುರಿರು ರೈತರ ದೂರವಾಣಿ ಸಂಖ್ಯೆಗೆ ಸಂದೇಶವೂ ಬರುತ್ತಿದೆ. ಇದರಿಂದ ಬೇರೆ ವ್ಯಕ್ತಿಗಳು ರೈತರಿಗೆ ಮೋಸ ಮಾಡಲು ಸಾಧ್ಯವಾಗುವುದಿಲ್ಲ.
‘ಮೊದಲು ಬಿತ್ತನೆ ಬೀಜ ತೆಗೆದುಕೊಳ್ಳಲು ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದರೆ ನಮ್ಮ ಪಾಲಿನ ಬೀಜ ತೆಗೆದುಕೊಂಡು ಹೋಗಿ ಮತ್ತೆ ನಮ್ಮ ಕೆಲಸಗಳು ಮಾಡುತ್ತಿದ್ದೇವು. ಆದರೆ ಕಳೆದ ವರ್ಷದಿಂದ ಹೊಸ ತಂತ್ರಜ್ಞಾನದಿಂದ ನಮ್ಮ ಬೇರೆಲ್ಲ ಕೆಲಸ ಕಾರ್ಯ ಬಿಟ್ಟು ಗಂಟೆಗಟ್ಟೆಲೇ ಕಾಯಬೇಕಿದೆ’ ಎನ್ನುತ್ತಾರೆ ಹುಡಗಿ ಗ್ರಾಮದ ರೈತ ಕರಿಬಸಪ್ಪ.
ಬಿತ್ತನೆ ಬೀಜದ ತೊಂದರೆ ಇಲ್ಲ. ಸ್ಕ್ಯಾನಿಂಗ್ ವ್ಯವಸ್ಥೆಯಿಂದ ಸ್ವಲ್ಪ ಸಮಯ ಆಗಬಹುದು. ಆದರೆ ಇದರಿಂದ ಬೀಜಗಳು ಕಳ್ಳ ಸಂತೆಗೆ ಹೋಗುವುದಿಲ್ಲ. ಎಲ್ಲ ರೈತರು ಸಹಕರಿಸಬೇಕು.– ಡಾ.ಸಿದ್ದಲಿಂಗಪ್ಪ ಪಾಟೀಲ, ಶಾಸಕ
ಸ್ಕ್ಯಾನಿಂಗ್ ವ್ಯವಸ್ಥೆಯಿಂದ ಬೀಜ ತೆಗೆದುಕೊಂಡ ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಬೀಜ ತೆಗೆದುಕೊಳ್ಳುವುದು ಪುನರಾವರ್ತನೆ ಆಗುವುದಿಲ್ಲ.– ಶರಣ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.