ADVERTISEMENT

ಶಾಹಿನ್ ಶಾಲೆ: ದೂರು ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 17:04 IST
Last Updated 5 ಫೆಬ್ರುವರಿ 2020, 17:04 IST

ಬೆಂಗಳೂರು: ಬೀದರ್ ಶಾಹಿನ್ ಶಾಲೆ ಹಾಗೂ ಪೋಷಕರ ವಿರುದ್ಧ ದಾಖಲಿಸಿರುವ ದೇಶದ್ರೋಹ ಪ್ರಕರಣವನ್ನು ವಾಪಸ್ ಪಡೆಯುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಬುಧವಾರ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿ ಒತ್ತಾಯಿಸಿತು.

ಭೇಟಿ ನಂತರ ಮಾತನಾಡಿದ ಶಾಸಕ ರಮೇಶ್ ಕುಮಾರ್, ‘ನಾಟಕ ಪ್ರದರ್ಶಿಸಿದರೆ, ಪೌರತ್ವ (ತಿದ್ದುಪಡಿ) ಕಾಯ್ದೆ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ ದೇಶದ್ರೋಹವಾಗುವುದೆ’ ಎಂದು ಪ್ರಶ್ನಿಸಿದರು.

ಮಕ್ಕಳು ಬಳಸಿರುವ ಭಾಷೆ ದೇಶದ್ರೋಹ ಎಂದು ಹೇಳಲಾಗುತ್ತಿದ್ದು, ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ವಾರದಲ್ಲಿ ಐದು ಬಾರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಕ್ಕಳ ಮೇಲೆ ದೇಶದ್ರೋಹದ ಆರೋಪ ಮಾಡುವುದು ಆಕ್ಷೇಪಾರ್ಹ. ವಿದ್ಯಾರ್ಥಿನಿ ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಅವರಿಗೆ ದೇಶದ್ರೋಹ ಎಂದರೇನು ಎಂಬುದೇ ಗೊತ್ತಿಲ್ಲ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲಿನ ನೂರಾರುಮಕ್ಕಳು ಊಟ, ನೀರು ಬಿಟ್ಟಿದ್ದಾರೆ. ಮಕ್ಕಳ ಬಗ್ಗೆಯಾದರೂ ಇವರಿಗೆ ಮಾನವೀಯತೆ ಬೇಡವೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಬಿಜೆಪಿ ಸರ್ಕಾರ ತನಗೆ ಬೇಕಾದಂತೆ ಪೊಲೀಸರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ.ಎರಡು ದಿನ ಕಾದುನೋಡುತ್ತೇವೆ. ಅಷ್ಟರಲ್ಲಿ ಮುಖ್ಯಮಂತ್ರಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹೋರಾಟಕ್ಕೆ ಇಳಿಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.