ADVERTISEMENT

ಮರಾಠಾ ಪ್ರಾಧಿಕಾರದಿಂದ ಸೌಲಭ್ಯ- ಶಾಸಕ ಶರಣು ಸಲಗರ

ಶಿವಾಜಿ ಜಯಂತಿಯಲ್ಲಿ ಶಾಸಕ ಶರಣು ಸಲಗರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 4:09 IST
Last Updated 21 ಫೆಬ್ರುವರಿ 2022, 4:09 IST
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದಲ್ಲಿ ಭಾನುವಾರ ನಡೆದ ಶಿವಾಜಿ ಜಯಂತಿಯಲ್ಲಿ ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾದಲ್ಲಿ ಭಾನುವಾರ ನಡೆದ ಶಿವಾಜಿ ಜಯಂತಿಯಲ್ಲಿ ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ರಾಜ್ಯ ಸರ್ಕಾರವು ಕರ್ನಾಟಕದಲ್ಲಿನ ಸಮಸ್ತ ಮರಾಠಾ ಸಮುದಾಯದ ಹಿತಕ್ಕಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ್ದು, ಈ ಮೂಲಕ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.

ತಾಲ್ಲೂಕಿನ ಬಟಗೇರಾದಲ್ಲಿ ಮರಾಠಾ ಸಮಾಜ ಸಂಘದಿಂದ ಭಾನುವಾರ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಧಿಕಾರಕ್ಕೆ ಮಾಜಿ ಶಾಸಕ ಎಂ.ಜಿ.ಮುಳೆ ಅವರನ್ನು ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿಯವರು ಈಗಾಗಲೇ ನೇಮಿಸಿದ್ದಾರೆ. ಇದಲ್ಲದೆ ಬಸವಕಲ್ಯಾಣದಲ್ಲಿ 20 ಕಿ.ಮೀ ದೂರದಿಂದ ಕಾಣುವಂಥ ಭವ್ಯವಾದ ಶಿವಾಜಿ ಪಾರ್ಕ್‌ಗಾಗಿ 8 ಎಕರೆ ಜಮೀನು ಕೂಡ ಮಂಜೂರು ಮಾಡಲಾಗಿದೆ ಎಂದರು.

ADVERTISEMENT

ಬರೀ ಜಯಂತಿ ಆಚರಣೆಯಿಂದ ಏನೂ ಸಾಧ್ಯವಿಲ್ಲ. ರಾಷ್ಟ್ರಪುರುಷರ ಸಂದೇಶದ ಪಾಲನೆ ಆಗಬೇಕು. ಮಾತೆ ಜೀಜಾಬಾಯಿಯವರು ಶಿವಾಜಿಯಂಥ ವೀರ ಪುರುಷನನ್ನು ತಯಾರು ಮಾಡಿದರು. ಮನೆಮನೆಯಲ್ಲೂ ಜೀಜಾಬಾಯಿ ತಯಾರಾಗಬೇಕು. ಶಿವಾಜಿಗೆ ಆಪ್ತರಾಗಿದ್ದ ತಾನಾಜಿ ಮಾಲಸೂರೆ ಅವರಂಥವರ ಅಗತ್ಯವೂ ಸಮಾಜಕ್ಕೆ ಇದೆ. ಅವರ ಕೊಂಡಾಣಾ ಕೋಟೆ ಎಲ್ಲರೂ ನೋಡಬೇಕು. ನನಗೆ ಚಿಕ್ಕಂದಿನಿಂದಲೂ ಇಂಥ ಐತಿಹಾಸಿಕ ತಾಣಗಳನ್ನು ನೋಡುವ ಹವ್ಯಾಸವಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮುಖಂಡರಾದ ರಾಜಕುಮಾರ ಶಿರಗಾಪುರ, ಶಿವಶರಣಪ್ಪ ಅಟ್ಟೂರ್, ಶಹಾಜಿ ಭೋಸ್ಲೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾಬಾಯಿ ಗೌಡೆ, ಉಪಾಧ್ಯಕ್ಷ ಜ್ಯೋತಿಬಾ ಸಾಳುಂಕೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬುರಾವ್ ಸಣಕಲ್, ಮರಾಠಾ ಸಮಾಜ ಸಂಘದ ಅಧ್ಯಕ್ಷ ಅಭಿನಂದ ಪಾಟೀಲ, ಕಾಳಿದಾಸ ಜಾಧವ, ಸಂಜೀವ ಗಾಯಕವಾಡ, ದಿಲೀಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.