ADVERTISEMENT

ಛಲಬಿಡದೆ ವೈದ್ಯಕೀಯ ಸೀಟ್ ಪಡೆದ ರೈತನ ಪುತ್ರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 13:59 IST
Last Updated 31 ಅಕ್ಟೋಬರ್ 2020, 13:59 IST
ಬೀದರ್‌ನ ಶಾಹೀನ್ ಕಾಲೇಜಿನಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ವೈಜಿನಾಥ ಪಾಟೀಲ ಅವರನ್ನು ಸನ್ಮಾನಿಸಿದರು
ಬೀದರ್‌ನ ಶಾಹೀನ್ ಕಾಲೇಜಿನಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ವೈಜಿನಾಥ ಪಾಟೀಲ ಅವರನ್ನು ಸನ್ಮಾನಿಸಿದರು   

ಬೀದರ್: ಭಾಲ್ಕಿ ತಾಲ್ಲೂಕಿನ ರಾಚಪ್ಪಗೌಡಗಾಂವ್ ಗ್ರಾಮದ ರೈತ ದಿ. ಬಸವರಾಜ ಪಾಟೀಲ ಅವರ ಪುತ್ರ ವೈಜಿನಾಥ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ದೀರ್ಘ ಕಾಲದ ನೀಟ್ ರಿಪೀಟರ್ ತರಬೇತಿ ಪಡೆದಿರುವ ವೈಜಿನಾಥ, ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ 514 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಎರಡನೇ ಪ್ರಯತ್ನದಲ್ಲಿ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ.

ಬೆಟಬಾಲಕುಂದಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿರುವ ವೈಜಿನಾಥ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 86 ರಷ್ಟು ಅಂಕ ಗಳಿಸಿದ್ದರು. ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶ ಪಡೆದು 2019ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ 81.33 ರಷ್ಟು ಅಂಕ ಗಳಿಸಿದ್ದರು. ನೀಟ್‍ನಲ್ಲಿ 345 ಅಂಕಗಳು ಮಾತ್ರ ಬಂದ ಕಾರಣ ಅವರ ವೈದ್ಯಕೀಯ ಪ್ರವೇಶದ ಆಸೆ ಈಡೇರಲಿಲ್ಲ.

ADVERTISEMENT

ಆದರೆ, ಛಲ ಬಿಡದ ಅವರು ನೀಟ್ ತರಬೇತಿಗಾಗಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜನ್ನು ಸಂಪರ್ಕಿಸಿದರು. ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖದೀರ್ ಅವರು ಶುಲ್ಕದಲ್ಲಿ ರಿಯಾಯಿತಿ ಕಲ್ಪಿಸಿ ನೆರವಾದರು. ಈ ನಡುವೆ ತಂದೆ ಬಸವರಾಜ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಧೃತಿಗೆಟ್ಟಿದ್ದ ವೈಜಿನಾಥ ಅವರಲ್ಲಿ ಆತ್ಮವಿಶ್ವಾಸವನ್ನು ಸಹ ತುಂಬಿದರು. ಗುರಿ ಸಾಧನೆಗೆ ಮಾರ್ಗದರ್ಶನವನ್ನೂ ಮಾಡಿದರು. ಕಠಿಣ ಪರಿಶ್ರಮ ವಹಿಸಿದ ವೈಜಿನಾಥ ಈ ಬಾರಿಯ ನೀಟ್‍ನಲ್ಲಿ ಉತ್ತಮ ಅಂಕ ಪಡೆದಿದ್ದು, ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.