ADVERTISEMENT

ಜನಪ್ರತಿನಿಧಿ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ಕೆಸರುಮಯವಾದ ಸೋನಾಳ ರಸ್ತೆ

ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 5:47 IST
Last Updated 23 ಜೂನ್ 2021, 5:47 IST
ಕಮಲನಗರ ತಾಲ್ಲೂಕಿನ ಸೋನಾಳ ರಸ್ತೆ ಮಧ್ಯೆ ತಗ್ಗುಗಳು ಬಿದ್ದಿರುವುದು
ಕಮಲನಗರ ತಾಲ್ಲೂಕಿನ ಸೋನಾಳ ರಸ್ತೆ ಮಧ್ಯೆ ತಗ್ಗುಗಳು ಬಿದ್ದಿರುವುದು   

ಕಮಲನಗರ: ರಸ್ತೆ ಉದ್ದಕ್ಕೂ ಬಿದ್ದಿರುವ ಹೊಂಡಗಳು, ಜಲ್ಲಿಕಲ್ಲುಗಳ ಮಧ್ಯೆ ವಾಹನ ಸಂಚಾರಕ್ಕೆ ಹೆಣಗಾಟ, ಹೊಂಡದಲ್ಲಿ ಜಾರಿ ಬೀಳುತ್ತಿರುವ ಪ್ರಯಾಣಿಕರು...

–ಇದು ಸೋನಾಳ ಗ್ರಾಮದಿಂದ ಲಖನಗಾಂವ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ದುಃಸ್ಥಿತಿ.

ಸೋನಾಳ ಗ್ರಾಮದಿಂದ ವಾಯಾ ಲಖನಗಾವ್ ಮೂಲಕ ಭಾಲ್ಕಿ, ಭಾತಾಂಬ್ರಾ, ಶಿವಣಿ, ಕಾಸರತುಗಾಂವ್, ಲಂಜವಾಡ್, ಬೋರಾಳ, ದೇವಣಿ ಸಂಗಮ, ಉದಗೀರ ಸೇರಿ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮೇಲೆ ವಾಹನ ಸಂಚಾರಕ್ಕಷ್ಟೇ ಅಲ್ಲ; ನಡೆದುಕೊಂಡು ಹೋಗುವುದೂ ಕಷ್ಟವಾಗಿದೆ.

ADVERTISEMENT

ಮಳೆ ನೀರು ನಿಂತಿರುವುದರಿಂದ ಗುಂಡಿ ಯಾವುದು, ರಸ್ತೆ ಯಾವುದು ಎಂಬುದು ತಿಳಿಯದಂತಾಗಿದೆ. ಇದರಿಂದ ಬೈಕ್‌ ಸವಾರರು ಅಪಘಾತಕ್ಕೀಡಾದ ಘಟನೆಗಳು ಸಂಭವಿಸಿವೆ. ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಸಮಸ್ಯೆ ತೋವ್ರವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾಲ್ಕಿ ತಾಲ್ಲೂಕಿನ ಲಖನಗಾಂವ್– ಸೋನಾಳ ಮಧ್ಯೆ ಬ್ರಿಜ್ ಕಂ ಬ್ಯಾರೇಜ್ ಇದೆ. ಬ್ಯಾರೇಜ್‌ ವರೆಗೆ ಗುಣಮಟ್ಟದ ದ್ವಿಪಥ ರಸ್ತೆ ಅಭಿವೃದ್ಧಿಪಡಿಸಿದೆ. ಆದರೆ, ಬ್ಯಾರೇಜ್‌ನಿಂದ ಸೋನಾಳ ಗ್ರಾಮದವರೆನ 2 ಕಿ.ಮೀ ರಸ್ತೆಯ ದುಸ್ಥಿತಿ ಹೇಳತೀರದಾಗಿದೆ. ಸೋನಾಳದಿಂದ ಕಮಲನಗರ 8 ಕಿ.ಮೀ ದೂರವಿದೆ. ಈ ರಸ್ತೆಯೂ ಹದಗೆಟ್ಟಿದೆ. ಲೋಕೋಪಯೋಗಿ ಇಲಾಖೆ ತಗ್ಗು ಗುಂಡಿಗಳು ಹೊರಂಡಿ ಕ್ರಾಸ್‌ವರೆಗಿನ ತಗ್ಗು ಮುಚ್ಚಿ ಕೈತೊಳೆದುಕೊಂಡಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

‘ಇನ್ನು ಈಚೆಗೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ರಾತ್ರಿ ಹೊತ್ತು ಈ ಮಾರ್ಗದಲ್ಲಿ ಸಂಚಾರ ಅಸಾಧ್ಯ. ಹಲವು ವರ್ಷಗಳಿಂದ ರಸ್ತೆ ಡಾಂಬರೀಕರಣ ಮಾಡದೇ ಇರುವುದರಿಂದ ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಉಂಟಾಗುತ್ತದೆ. ಆದರೆ, ನಮ್ಮ ಸಮಸ್ಯೆ ಯಾರು ಆಲಿಸುತ್ತಿಲ್ಲ’ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ರಸ್ತೆ ಬದಿ ಬೇಕಾಬಿಟ್ಟಿ ಜಾಲಿಮರ, ಹೊಲದ ನಾಲೆ ತೆಗೆದ ಪರಿಣಾಮ ನಡೆಯಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶೀಘ್ರದಲ್ಲಿ ರಸ್ತೆ ದುರಸ್ಥಿ ಮಾಡಬೇಕು’ ಎಂದು ಸೋನಾಳ, ಕಮಲನಗರ, ಲಖನಗಾಂವ್, ಲಂಜವಾಡ್, ಹೊರಂಡಿ, ಚಂದನವಾಡಿ, ಚ್ಯಾಂಡೇಶ್ವರ ಗ್ರಾಮಸ್ಥರುಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.