ಬಸವಕಲ್ಯಾಣ: ಪಟ್ಟಣದಲ್ಲಿನ ಮಾನಸಿಕ ಅಸ್ವಸ್ಥರಿಗೆ ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಇಲ್ಲಿನ ಯುವಕ ಲೋಕೇಶ ಮೋಳಕೆರೆಯವರು ತನ್ನ 29 ನೇ ಜನ್ಮ ದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.
ಕೊರೊನಾ ವೈರಾಣು ಹರಡಬಹುದು ಎಂಬ ಸಂಶಯದಿಂದ ನೆಂಟರಿಷ್ಟರು ಹಾಗೂ ಸ್ನೇಹಿತರು ಎದುರಿಗೆ ಬಂದರೂ ದೂರ ಸರಿಯುವ ಕಾಲ ಇದಾಗಿದೆ. ಇಂಥದರಲ್ಲಿ ಈಗಾಗಲೇ ಸ್ನಾತಕೋತ್ತರ ಪದವಿ ಮುಗಿಸಿ ಸಿಎಂಎಂ ಖಾಸಗಿ ಕೆಲಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಲೋಕೇಶ ಅವರು ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಜರ್ ಹಚ್ಚಿ ಗ್ಲೌಸ್ ಹಾಕಿಕೊಂಡು ಅಸ್ವಸ್ಥರ ಮೈಯ ಕೊಳೆ ತೊಳೆದಿರುವುದರಿಂದ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹುಚ್ಚ ಅಶೋಕ ಎನ್ನುವವನು 25 ವರ್ಷಗಳಿಂದ ಇಲ್ಲಿನ ಮುಖ್ಯ ರಸ್ತೆಯಲ್ಲಿ ತಿರುಗುತ್ತಿದ್ದಾನೆ. ಸಿಟ್ಟಿಗೆ ಬಂದು ಹೊಡೆಯಲು ಹೋಗುತ್ತಾನೆ. ಹುಚ್ಚುಹುಚ್ಚಾಗಿ ವರ್ತಿಸುತ್ತಾನೆ. ಯಾರೋ ಕೊಟ್ಟ ರೊಟ್ಟಿ ತಿಂದು ಚಹಾ ಹೋಟಲ್ ನಲ್ಲಿ ನೀರು ಕುಡಿಯುತ್ತಾನೆ. ಲೋಕೇಶನು ಇವನನ್ನು ಕೆಲವರ ಸಹಾಯದಿಂದ ಹಿಡಿದು ಕಟ್ಟೆಯ ಮೇಲೆ ಕೂಡಿಸಿ ಈತನ ತಲೆಕೂದಲು ತೆಗೆದು ಮೈಯ ಕೊಳೆ ತೊಳೆದು ಆತನಿಗೆ ಹೊಸ ಟೀ ಶರ್ಟ್ ಮತ್ತು ಪ್ಯಾಂಟ್ ತೊಡಿಸಿದ್ದಾನೆ. `ಜನ್ಮದಿನ ಅದ್ದೂರಿಯಾಗಿ ಆಚರಿಸಿದರೆ ಪ್ರಯೋಜನವಿಲ್ಲ. ಮಾನಸಿಕರ ಸೇವೆಯಿಂದ ನೆಮ್ಮದಿಯಾದರೂ ಸಿಕ್ಕಿತ್ತೆಂದು ಹೀಗೆ ಮಾಡಿದ್ದೇನೆ’ ಎನ್ನುತ್ತಾರೆ
ಲೋಕೇಶ.
ಹುಚ್ಚರಾಗಿರುವ ಹಾಗೂ ರಸ್ತೆಯಲ್ಲಿ ಅಲೆಯುವ ತಿರುಪತಿ ಮತ್ತು ಸುನಿತಾ ಈ ಇಬ್ಬರಿಗೂ ಹರಸಾಹಸ ನಡೆಸಿ ಇದೇ ರೀತಿ ಸ್ನಾನ ಮಾಡಿಸಿ ಬಟ್ಟೆ ತೊಡಿಸಿ, ಊಟ, ಹಣ್ಣು ನೀಡಿ ಮಾಸ್ಕ್ ತೊಡಿಸಿದ್ದಾನೆ. ನಗರಸಭೆ ಸದಸ್ಯ ರವೀಂದ್ರ ಬೋರೋಳೆ, ಮುಖಂಡ ಯುವರಾಜ ಭೆಂಡೆ ಹಾಗೂ ಪೊಲೀಸ್ ಇಲಾಖೆ ಹಾಗೂ ನಗರಸಭೆ ಪ್ರತಿನಿಧಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.