ಹುಮನಾಬಾದ್ : ಹುಮನಾಬಾದ್ ವಿಧಾನ ಸಭಾ ಕ್ಷೇತ್ರ ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು. ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಸಂಸ್ಕಾರ ನೀಡಬೇಕು. ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗುವಷ್ಟು ಶಕ್ತಿ ಅವರಲ್ಲಿ ಇರುವುದಿಲ್ಲ. ಹೀಗಾಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದರು.
ತಾಲ್ಲೂಕಿನ ವಿದ್ಯಾವಂತ ಯುವಕರು ಐಎಎಸ್ , ಐಪಿಎಸ್ ಸೇರಿದಂತೆ ರಾಜ್ಯ ರಾಷ್ಟ್ರ ಮಟ್ಟದ ಉನ್ನತ ಹುದ್ದೆಗಳಲ್ಲಿ ಸೇವೆ ಮಾಡುವಂತೆ ಆಗಬೇಕು. ಇದಕ್ಕೆ ನನ್ನ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಅಂಜುಂ ತಬಸುಮ್ ಮಾತನಾಡಿ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಅನೇಕ ಹೋರಾಟಗಳ ಪ್ರತಿಫಲವಾಗಿ ನಮ್ಮಗೆ ಸ್ವಾತಂತ್ರ್ಯ ದೊರಕಿದೆ. ಭಾರತ ವಿವಿಧತೆಯಲ್ಲಿ ಏಕತೆಯಿಂದ ಇಡೀ ಪ್ರಪಂಚಕ್ಕೆ ಮಾದರಿ ಆಗಿದೆ. ವಿಶ್ವ ಶಾಂತಿ ಗೌತಮ್ ಬುದ್ಧ, ಅಂಬೇಡ್ಕರ್ , ಮಾಹವೀರರಂತಹ ಮಹಾನ ವ್ಯಕ್ತಿಗಳ್ಳನ್ನು ಜನ್ಮ ನೀಡಿದ ಭೂಮಿ ನಮ್ಮದಾಗಿದೆ. ಬರುವ ದಿನಗಳಲ್ಲಿ ಭಾರತ ಪ್ರಭಲ ರಾಷ್ಟ್ರಗಳ ಪಟ್ಟಿಯಲ್ಲಿ ಬರಲಿದೆ. ದೇಶದ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಗೌರವದಿಂದ ಕಾಣಬೇಕು ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದಿಪೀಕಾ ನಾಯ್ಕರ್, ಗ್ರೇಡ್ 2 ತಹಶೀಲ್ದಾರ್ ಗೀತಾ ಮಠಪತಿ, ಪುರಸಭೆ ಮುಖ್ಯಾಧಿಕಾರಿ ವನಿತಾಬಾಯಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಿಂಗರಾಜ ಅರಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಸಿದ್ದೇಶ್ವರ, ಸಿಡಿಪಿಒ ಶಿವಪ್ರಕಾಶ್ ಹಿರೇಮಠ, ಬಿಇಒ ವೆಂಕಟೇಶ್ ಗೂಡಾಳ್, ಕಾರ್ಮಿಕ ಅಧಿಕಾರಿ ಗಂಗಾಧರ್, ಹಿಂದುಳಿದ ವರ್ಗಗಳ ಅಧಿಕಾರಿ ವಿಠಲ್, ಕೃಷಿ ಅಧಿಕಾರಿ ಶರಣ್ ಕುಮಾರ್, ಪಿಎಸ್ಐ ಸುರೇಶ್ ಕುಮಾರ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.