ADVERTISEMENT

ಐತಿಹಾಸಿಕ ದೇಗುಲ ಕಟ್ಟಡ ಶಿಥಿಲ

ಕರಕನಳ್ಳಿ: ಜೀವಭಯದಲ್ಲಿ ಭಕ್ತರಿಂದ ದರ್ಶನ; ದೇಗುಲದ ಪುನಶ್ಚೇತನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 5:03 IST
Last Updated 16 ಸೆಪ್ಟೆಂಬರ್ 2020, 5:03 IST
ಚಿಟಗುಪ್ಪ ತಾಲ್ಲೂಕಿನ ಸುಕ್ಷೇತ್ರ ಕರಕನಳ್ಳಿ ಗ್ರಾಮದ ಐತಿಹಾಸಿಕ ಗಂಗಾಧರ ಬಕ್ಕಪ್ರಭು ದೇಗುಲದ ಚಾವಣಿ ಶಿಥಿಲಗೊಂಡಿದೆ
ಚಿಟಗುಪ್ಪ ತಾಲ್ಲೂಕಿನ ಸುಕ್ಷೇತ್ರ ಕರಕನಳ್ಳಿ ಗ್ರಾಮದ ಐತಿಹಾಸಿಕ ಗಂಗಾಧರ ಬಕ್ಕಪ್ರಭು ದೇಗುಲದ ಚಾವಣಿ ಶಿಥಿಲಗೊಂಡಿದೆ   

ಚಿಟಗುಪ್ಪ: ತಾಲ್ಲೂಕಿನ ಕರಕನಳ್ಳಿ ಗ್ರಾಮದ ಐತಿಹಾಸಿಕ ಗುರುಗಂಗಾಧರ ಬಕ್ಕಪ್ರಭು ದೇಗುಲದ ಚಾವಣಿ ಹಲವು ವರ್ಷಗಳಿಂದ ಶಿಥಿಲಗೊಂಡಿದ್ದು, ಭಕ್ತರು ನಿತ್ಯ ಜೀವ ಭಯದಲ್ಲಿ ಬಕ್ಕಪ್ರಭುಗಳ ಗದ್ದುಗೆ ದರ್ಶನ ಪಡೆಯುವಂತಾಗಿದೆ.

ದೇಗುಲದ ವಿಶಾಲವಾದ ಆವರಣದ ನಾಲ್ಕು ದಿಕ್ಕಿನ ಕಟ್ಟಡದ ಚಾವಣಿ ಆರ್‍.ಸಿ.ಸಿ ಕಳಚಿದೆ. ಒಳಗಡೆಯ ಕಬ್ಬಿಣದ ಸಲಾಕೆಗಳು ತುಕ್ಕು ಹಿಡಿದಿವೆ. ಮೇಲಿಂದ ಮೇಲೆ ನಿತ್ಯ ಚಾವಣಿಯ ಹಕ್ಕಳಿಕೆಗಳು ಕಳಚಿ ಬೀಳುತ್ತಿವೆ.

‘ಜಿಲ್ಲೆಯಲ್ಲಿಯೇ ಅತ್ಯಂತ ಪುರಾತನ ದೇಗುಲಗಳಲ್ಲಿ ಇದು ಒಂದಾಗಿದ್ದು, ಈ ಹಿಂದೆ ಕೆಲವು ಭಕ್ತರ ಮೇಲೆ ಚಾವಣಿಯ ಹಕ್ಕಳಿಕೆಗಳು ಕಳಚಿ ಬಿದ್ದಿವೆ. ಯಾವ ಕ್ಷಣದಲ್ಲಿ ಕಟ್ಟಡ ಕುಸಿಯುತ್ತದೆಯೋ ಎಂಬ ಆತಂಕದಲ್ಲಿ ಭಕ್ತರು, ಗ್ರಾಮಸ್ಥರಿದ್ದಾರೆ. ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಟ್ಟಿರುವ ದೇಗುಲಕ್ಕೆ ಸರ್ಕಾರ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದು ಗ್ರಾಮದ ಶಿಕ್ಷಕ ವಿಠಲರೆಡ್ಡಿ ತಿಳಿಸಿದ್ದಾರೆ.

ADVERTISEMENT

‘ರಾಜ್ಯ, ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ನಿತ್ಯ ನೂರಾರು ಭಕ್ತರು ದೇಗುಲಕ್ಕೆ ಆಗಮಿಸುತ್ತಾರೆ. ಹೀಗಾಗಿ ಭಕ್ತರಿಗೆ ಮೂಲ ಸೌಲಭ್ಯ ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟಡದ ದುರಸ್ತಿ ಬಗ್ಗೆ ಗಮನ ಸೆಳೆಯಲಾಗಿದೆ. ಆದರೂ ಇದುವರೆಗೂ ಯಾವುದೇ ಪ್ರಯೋಜನ ಕಂಡುಬಂದಿಲ್ಲ. ನಿತ್ಯದ ಆದಾಯ ನಿರೀಕ್ಷೆಗೂ ಹೆಚ್ಚಿದೆ. ದೂರದಿಂದ ಬರುವ ಭಕ್ತರು ರಾತ್ರಿ ದೇಗುಲದಲ್ಲಿ ತಂಗುವುದರಿಂದ ಶಿಥಿಲ ಕಟ್ಟಡ ಬೇಗ ದುರಸ್ತಿ ಕೈಗೊಳ್ಳಬೇಕಿದೆ’ ಎಂದು ದೇಗುಲದ ಭಕ್ತ ಶಂಕರೆಪ್ಪ ನುಡಿಯುತ್ತಾರೆ.

‘ದೇಗುಲದ ಮುಖ್ಯ ಕಚೇರಿಯ ಎದುರುಗಡೆಯ ನಾಲ್ಕು ಟಾಕುಗಳ ಚಾವಣಿ ತೀರ ಶಿಥಿಲವಾಗಿದ್ದು, ಮಳೆ ಆರಂಭವಾದಲ್ಲಿ ಚಾವಣಿಯಿಂದ ನೀರು ಸುರಿಯುತ್ತಿರುವುದರಿಂದ ಆಹಾರ ಧಾನ್ಯಗಳು ಹಾಳಾಗುತ್ತಿವೆ. ದಾಸ್ತಾನು ಸಂಗ್ರಹ ಸಮಸ್ಯೆ ಆಗುತ್ತಿದೆ. ಭಕ್ತರಿಂದ ದಾನದ ರೂಪದಲ್ಲಿ ಬರುವ ದವಸ ಧಾನ್ಯಗಳು ಸಂಗ್ರಹಿಸಿಡಲು ಕಷ್ಟವಾಗುತ್ತಿದೆ’ ಎಂದು ದೇಗುಲದ ಸಿಬ್ಬಂದಿ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.