ಬೀದರ್: ಮಾರುಕಟ್ಟೆ ಶುಲ್ಕದಲ್ಲಿನ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಗಾಂಧಿಗಂಜ್ ವ್ಯಾಪಾರಿಗಳು ನಡೆಸುತ್ತಿರುವ ಅನಿರ್ದಿಷ್ಟ ವ್ಯಾಪಾರ, ವಹಿವಾಟು ಬಂದ್ ಮಂಗಳವಾರ ಎಂಟನೇ ದಿನಕ್ಕೆ ಕಾಲಿಟ್ಟಿದೆ.
ಕೊರೊನಾ ಸೋಂಕು ತಡೆಗೆ ದೇಶದಾದ್ಯಂತ ಲಾಕ್ಡೌನ್ ವಿಧಿಸಿದ ಸಂದರ್ಭದಲ್ಲಿ ಅಗತ್ಯ ಸೇವೆಗಳ ವ್ಯಾಪ್ತಿಗೆ ಬರುವ ಕಾರಣ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟು ರೈತರಿಗೆ ಸೇವೆ ಒದಗಿಸಿದ್ದರು. ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವ್ಯಾಪಾರ, ವಹಿವಾಟು ಬಂದ್ ಮಾಡಿದ್ದರಿಂದ ನಗರದ ಪ್ರಮುಖ ಮಾರುಕಟ್ಟೆ ಗಾಂಧಿಗಂಜ್ ಸ್ತಬ್ಧವಾಗಿದೆ. ಎಂಟು ದಿನಗಳಿಂದ ಆಹಾರಧಾನ್ಯಗಳ ಖರೀದಿ, ಮಾರಾಟ ಹಾಗೂ ರೈತರ ಓಡಾಟ ಇಲ್ಲದೇ ಭಣಗುಡುತ್ತಿದೆ.
ಶೇ 1 ರಷ್ಟು ಶುಲ್ಕದಿಂದ ಪರವಾನಗಿ ಪಡೆದ ವ್ಯಾಪಾರಿಗಳಿಗೆ ವಿನಾಯಿತಿ ನೀಡಬೇಕು. ಏಕರೂಪದ ಕಾಯ್ದೆ ಹಾಗೂ ಏಕರೂಪದ ಮಾರುಕಟ್ಟೆ ಶುಲ್ಕ ನೀತಿ ಜಾರಿಗೆ ತರಬೇಕು ಎನ್ನುವುದು ಗಾಂಧಿಗಂಜ್ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಮುಂದಾಳತ್ವದಲ್ಲಿ ಬಂದ್ ನಡೆಸುತ್ತಿರುವ ವ್ಯಾಪಾರಿಗಳ ಬೇಡಿಕೆಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.