ADVERTISEMENT

ಹೊನ್ನಿಕೇರಿ: ಬಡಕಲಾಗುತ್ತಿರುವ ಹರಕೆ ಬಿಟ್ಟ ಜಾನುವಾರುಗಳು

ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನದ ಮೂಕಪ್ರಾಣಿಗಳ ಗೋಳು

ನಾಗೇಶ ಪ್ರಭಾ
Published 23 ಫೆಬ್ರುವರಿ 2025, 4:51 IST
Last Updated 23 ಫೆಬ್ರುವರಿ 2025, 4:51 IST
ಹೊನ್ನಿಕೇರಿ ಸಿದ್ಧೇಶ್ವರ ಮಂದಿರದ ಪರಿಸರದಲ್ಲಿನ ಗೋಶಾಲೆ ಇರುವ ಜಾನುವಾರುಗಳು
ಹೊನ್ನಿಕೇರಿ ಸಿದ್ಧೇಶ್ವರ ಮಂದಿರದ ಪರಿಸರದಲ್ಲಿನ ಗೋಶಾಲೆ ಇರುವ ಜಾನುವಾರುಗಳು   

ಹೊನ್ನಿಕೇರಿ(ಜನವಾಡ): ಸರಿಯಾಗಿ ಮೇವು ಸಿಗದೆ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನದ ಗೋಶಾಲೆಯ ಜಾನುವಾರುಗಳು ಬಡಕಲಾಗುತ್ತಿವೆ.

ಗೋಶಾಲೆಯಲ್ಲಿ ಹೋರಿ, ಹಸುಗಳು ಸೇರಿದಂತೆ ಒಟ್ಟು 71 ಜಾನುವಾರುಗಳು ಇವೆ. ಈ ಪೈಕಿ ಅನೇಕ ಜಾನುವಾರುಗಳ ದೇಹದಲ್ಲಿ ಎಲುಬುಗಳೇ ಕಾಣುತ್ತಿವೆ. ಹೊಟ್ಟೆ ತುಂಬಾ ದೊರೆಯದ ಒಣ-ಹಸಿ ಮೇವು, ವಿಶ್ರಾಂತಿಗೆ ಸಮತಟ್ಟಾಗಿರದ ನೆಲ, ಬೇಸಿಗೆಯಲ್ಲಿ ಬೀಸುವ ಬಿಸಿ ಗಾಳಿ, ಅಸ್ವಚ್ಛತೆ ಮೊದಲಾದ ಕಾರಣಗಳಿಂದ ಜಾನುವಾರುಗಳು ಹೈರಾಣಾಗುತ್ತಿವೆ.

ಹೊನ್ನಿಕೇರಿ ಸಿದ್ಧೇಶ್ವರ ಜಿಲ್ಲೆ ಸೇರಿದಂತೆ ವಿವಿಧೆಡೆಯ ಅಸಂಖ್ಯಾತ ಭಕ್ತರ ಮನೆ ದೇವರು. ಭಕ್ತರು ಹರಕೆ ರೂಪದಲ್ಲಿ ದೇಗುಲಕ್ಕೆ ಹೋರಿ, ಹಸು ಬಿಡುತ್ತಾರೆ. ಆದರೆ, ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಸ್ಥಾನದ ಗೋಶಾಲೆಯಲ್ಲಿ ಅವುಗಳ ಪೋಷಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರು ಭಕ್ತರದ್ದಾಗಿದೆ.

ADVERTISEMENT

ನಿರ್ವಹಣೆ ಕೊರತೆಯಿಂದಾಗಿ ಗೋಶಾಲೆಯ ಜಾನುವಾರುಗಳು ಹಿಂಸೆ ಅನುಭವಿಸುತ್ತಿವೆ. ಆದರೂ, ಮೂಕ ಪ್ರಾಣಿಗಳ ರೋದನ ಯಾರಿಗೂ ಕೇಳಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.

ಈಚೆಗೆ ದೇವಸ್ಥಾನಕ್ಕೆ ಹೋರಿ ಬಿಡಲು ಬಂದಿದ್ದ ಭಕ್ತರೊಬ್ಬರು ಗೋಶಾಲೆ ಸ್ಥಿತಿ ಕಂಡು ದಂಗಾಗಿದ್ದರು. ಅದರೊಳಗೆ ಕರು ಸತ್ತು ಬಿದ್ದಿದ್ದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಸಹ ಹರಿಬಿಟ್ಟಿದ್ದರು.

ಗೋಶಾಲೆಯಲ್ಲಿನ ಹೋರಿ, ಹಸುಗಳಿಗೆ ಹೊಟ್ಟೆ ಹಸಿವು ತಣಿಸಿಕೊಳ್ಳುವಷ್ಟು ಮೇವು ಕೊಡುತ್ತಿಲ್ಲ. ನಾಲ್ಕಾರು ಕಣಿಕೆ ತುಂಡುಗಳನ್ನು ಮಾತ್ರ ಹಾಕಲಾಗುತ್ತಿದೆ. ಇದರಿಂದ ಜಾನುವಾರುಗಳು ಸೊರಗಿದ್ದು, ಅವುಗಳ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಗಮನ ಸೆಳೆಯುವುದಕ್ಕಾಗಿಯೇ ಗೋಶಾಲೆಯಲ್ಲಿ ಕರು ಸತ್ತಿದ್ದ ದೃಶ್ಯ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದೆ ಎಂದು ದೇವಸ್ಥಾನದ ಭಕ್ತ, ಸದ್ಯ ಹೈದರಾಬಾದ್‍ನಲ್ಲಿ ನೆಲೆಸಿರುವ ಔರಾದ್ ತಾಲ್ಲೂಕಿನ ಶೆಂಬೆಳ್ಳಿಯ ಧನರಾಜ ಬಿರಾದಾರ ತಿಳಿಸಿದರು.

ಹರಕೆ ಕಾರಣ ₹ 12 ಸಾವಿರ ಕೊಟ್ಟು ಹೋರಿ ಖರೀದಿಸಿ, ದೇವಸ್ಥಾನಕ್ಕೆ ತಂದು ಬಿಟ್ಟಿದ್ದೇವೆ. ದೇವಸ್ಥಾನಕ್ಕೆ ಅದರ ನಿರ್ವಹಣೆ ವೆಚ್ಚ ₹ 3 ಸಾವಿರ ಸಹ ಪಾವತಿಸಿದ್ದೇವೆ. ಆದರೆ, ಗೋಶಾಲೆಯಲ್ಲಿ ಜಾನುವಾರುಗಳ ನಿರ್ವಹಣೆಯೇ ಆಗುತ್ತಿಲ್ಲ. ಹೀಗಾಗಿ ಜಾನುವಾರು ಬಿಟ್ಟವರಿಗೆ ಶಾಪ ತಟ್ಟಲಿದೆ. ನಿರ್ವಹಣೆ ಮಾಡಲಾಗದಿದ್ದರೆ ಗೋಶಾಲೆ ಮುಚ್ಚಬೇಕು ಎಂದು ಒತ್ತಾಯಿಸಿದರು.

ಗೋಶಾಲೆಯಲ್ಲಿನ ಜಾಗ ಸಮತಟ್ಟಾಗಿ ಇಲ್ಲ. ಇದರಿಂದ ಜಾನುವಾರುಗಳಿಗೆ ಕೂರಲು ಬಹಳ ತ್ರಾಸವಾಗುತ್ತಿದೆ. ಫ್ಯಾನ್ ಅಳವಡಿಸದಿರುವುದರಿಂದ ಬೇಸಿಗೆಯಲ್ಲಿ ದಿನದೂಡುವುದು ಕಷ್ಟಕರವಾಗಿದೆ. ಒಂದನ್ನು ಮತ್ತೊಂದರಿಂದ ನಿಗದಿತ ಅಂತರದಲ್ಲಿ ಕಟ್ಟದ ಕಾರಣ ದೊಡ್ಡ ಜಾನುವಾರು ಸಣ್ಣ, ಜಾನುವಾರು ಮೇಲೆ ಹಲ್ಲೆ ಮಾಡುತ್ತಿವೆ. ಸಕಾಲಕ್ಕೆ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡುತ್ತಿಲ್ಲ ಎಂದು ಆಣದೂರಿನ ಯುವ ಮುಖಂಡ ಚೇತನ್ ಸೋರಳ್ಳಿ ಆರೋಪಿಸಿದರು.

ಮಳೆಗಾಲದಲ್ಲಿ ಜಾನುವಾರುಗಳಿಗೆ ಹಸಿರು ಮೇವಿನ ಸಮಸ್ಯೆಯಾಗುವುದಿಲ್ಲ. ಬೇಸಿಗೆಯಲ್ಲಿ ತೊಂದರೆಯಾಗುತ್ತದೆ. ದೇವಸ್ಥಾನದ ಜಮೀನು ಸಮತಟ್ಟುಗೊಳಿಸಿ ಹುಲ್ಲು ಬೆಳೆಸಿದರೆ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಭಕ್ತರು ಜಾನುವಾರು ನಿರ್ವಹಣೆ ವೆಚ್ಚದ ಬದಲು ಮೇವು ಕೊಟ್ಟರೆ ಇನ್ನಷ್ಟು ಒಳ್ಳೆಯದು ಎಂದು ಗ್ರಾಮದ ರಮೇಶ ಶೆಕೋಬಾ ಅಭಿಪ್ರಾಯಪಟ್ಟರು.

ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು, ಆರೋಗ್ಯ ತಪಾಸಣೆ ಮೊದಲಾದ ವ್ಯವಸ್ಥೆ ಇದೆ. ಸದ್ಯ ವ್ಯಕ್ತಿಯೊಬ್ಬರ ಹೊಲವನ್ನು ಗುತ್ತಿಗೆ ಪಡೆದು, ಅದರೊಳಗಿನ ಹಸಿ ಮೇವು ತಂದು ಜಾನುವಾರುಗಳಿಗೆ ಹಾಕಲಾಗುತ್ತಿದೆ ಎಂದು ಸಿದ್ಧೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಂತರಾವ್ ಕುಲಕರ್ಣಿ ಪ್ರತಿಕ್ರಿಯಿಸಿದರು.

ಜಾನುವಾರು ನೋಡಿಕೊಳ್ಳಲು ಒಬ್ಬರು ಇದ್ದಾರೆ. ಇನ್ನೊಬ್ಬರು ಸಹಾಯಕರ ಸೇವೆ ಪಡೆಯಲಾಗುತ್ತಿದೆ. ದೇವಸ್ಥಾನದ ಆರು ಸಿಬ್ಬಂದಿ ಸ್ವಚ್ಛತಾ ಕಾರ್ಯ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಅನೇಕ ಭಕ್ತರು ಹಾಲು ಕುಡಿಯುವ ಸಣ್ಣ ಕರುಗಳನ್ನು ತಂದು ಬಿಡುತ್ತಾರೆ. ಅವು ಹುಲ್ಲು ತಿನ್ನುವುದಿಲ್ಲ. ಹೀಗಾಗಿ ಪೋಷಣೆಗೆ ಸಮಸ್ಯೆಯಾಗುತ್ತದೆ. ಇತ್ತೀಚೆಗೆ ಕರುವೊಂದು ಸತ್ತಿದ್ದಕ್ಕೆ ತಿಂದ ಹುಲ್ಲು ಜೀರ್ಣವಾಗದಿರುವುದೇ ಕಾರಣವಾಗಿದೆ ಎಂದು ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆ ಅಧೀನದ ಗೋಶಾಲೆ ಎರಡು ಶೆಡ್‍ಗಳಲ್ಲಿ ಇರುವ ಗೋಶಾಲೆ ಹರಕೆ ಜಾನುವಾರು ನಿರ್ವಹಣೆಗೆ ₹ 3,000 ಶುಲ್ಕ

ಯಾರು ಏನು ಹೇಳ್ತಾರೆ?

ದೇವಸ್ಥಾನದವರು ಗೋಶಾಲೆ ಚೆನ್ನಾಗಿ ನಿರ್ವಹಿಸದಿದ್ದರೆ ಭಕ್ತರು ಹರಕೆ ರೂಪದಲ್ಲಿ ಗೂಳಿ, ಹಸು ಬಿಡುವ ಬದಲು ದೇವಸ್ಥಾನ ಅಭಿವೃದ್ಧಿಗೆ ಹಣ ಕೊಡುವುದು ಉತ್ತಮ
ಧನರಾಜ ಬಿರಾದಾರ ದೇವಸ್ಥಾನದ ಭಕ್ತ
ಬಿಸಿಲು, ಮಳೆಯಿಂದ ಮೇವು ಹಾಳಾಗುವುದನ್ನು ತಪ್ಪಿಸಲು ಗೋಶಾಲೆಯ ಮೇವು ಸಂಗ್ರಹಕ್ಕೆ ಪ್ರತ್ಯೇಕ ಕೋಣೆ ನಿರ್ಮಿಸಬೇಕು
ಚೇತನ್ ಸೋರಳ್ಳಿ ಆಣದೂರು
ಸಿದ್ಧೇಶ್ವರ ದೇವಸ್ಥಾನ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಹರಕೆ ಈಡೇರಿದಾಗ ಭಕ್ತರು ದೇವಸ್ಥಾನಕ್ಕೆ ಹೋರಿ, ಕರುಗಳನ್ನು ತಂದು ಬಿಡುತ್ತಾರೆ
ರಮೇಶ ಶೆಕೋಬಾ ಗ್ರಾಮಸ್ಥ
ಸಣ್ಣ ಕರುಗಳಿಗೆ ಇಳಿಜಾರಿನ ಗೋಶಾಲೆಗೆ ಬರಲು ತೊಂದರೆಯಾಗುತ್ತಿದ್ದರಿಂದ ಮೇಲುಗಡೆ ಶೆಡ್ ನಿರ್ಮಿಸಿ, ಅಲ್ಲಿಯೇ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ
ಅನಂತರಾವ್ ಕುಲಕರ್ಣಿ ಸಿದ್ಧೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.