ADVERTISEMENT

ಆರ್‌ಟಿಪಿಸಿಆರ್‌ ವರದಿ ಇಲ್ಲದಿದ್ದರೆ ಪ್ರವೇಶ ನಿರ್ಬಂಧ

ತೆಲಂಗಾಣ, ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ

ಚಂದ್ರಕಾಂತ ಮಸಾನಿ
Published 29 ನವೆಂಬರ್ 2021, 14:18 IST
Last Updated 29 ನವೆಂಬರ್ 2021, 14:18 IST
ಬೀದರ್‌ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯಕ್ತಿಗೆ ಸ್ಥಳದಲ್ಲೇ ಕೋವಿಡ್‌ ಲಸಿಕೆ ನೀಡಿದರು / ಚಿತ್ರ: ಗುರುಪಾದಪ್ಪ ಸಿರ್ಸಿ
ಬೀದರ್‌ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯಕ್ತಿಗೆ ಸ್ಥಳದಲ್ಲೇ ಕೋವಿಡ್‌ ಲಸಿಕೆ ನೀಡಿದರು / ಚಿತ್ರ: ಗುರುಪಾದಪ್ಪ ಸಿರ್ಸಿ   


ಬೀದರ್‌: ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮಿಕ್ರಾನ್ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿ ತಪಾಸಣೆ ಬಿಗಿಗೊಳಿಸಲಾಗಿದೆ.

ಬೀದರ್‌ನಿಂದ ವಿಮಾನಯಾನ ಸೇವೆ ಆರಂಭವಾಗಿಲ್ಲ. ಹೈದರಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ರೈಲಿನಲ್ಲಿ ಜಿಲ್ಲೆಗೆ ಬರುವ ಪ್ರಯಾಣಿಕರ ತಪಾಸಣೆಗೂ ಸೂಚಿಸಲಾಗಿದೆ.

ಬೀದರ್‌ ತಾಲ್ಲೂಕಿನ ಶಹಾಪುರ ಬಳಿ, ಔರಾದ್‌ ತಾಲ್ಲೂಕಿನ ಬಾರ್ಡ್‌ರ ತಾಂಡಾ, ವನಮಾರಪಳ್ಳಿ, ಕಮಲನಗರ, ಚಿಕ್ಲಿ, ಚಿಕ್ಲಿ(ಬಿ), ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಹುಲಸೂರ ತಾಲ್ಲೂಕಿನ ಅಂಬೇವಾಡಿಯಲ್ಲಿ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ.

ADVERTISEMENT

ಜಿಲ್ಲೆಯ ಗಡಿ ಆಚೆ ಹಾಗೂ ಈಚೆ ಅನೇಕ ಹಳ್ಳಿಗಳು ಇರುವ ಕಾರಣ ಗ್ರಾಮಸ್ಥರು ಆಟೊರಿಕ್ಷಾಗಳಲ್ಲಿ ಊರಿಗೆ ಹೋಗಿ ಬರುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಆಟೊ, ಕಾರು ಹಾಗೂ ಬಸ್‌ ತಡೆದು ಥರ್ಮಲ್‌ ಸ್ಕ್ರೀನಿಂಗ್ ಮಾಡುತ್ತಿದ್ದಾರೆ.
ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳದ ಹಾಗೂ ತಪಾಸಣೆ ಮಾಡಿಸಿ ಕೊಂಡರೂ ದಾಖಲೆಗಳನ್ನು ತರದ ವ್ಯಕ್ತಿಗಳನ್ನು ವಾಪಸ್‌ ಕಳಿಸುತ್ತಿದ್ದಾರೆ.

‘ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬರುತ್ತಿರುವವರ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್‌ ಪ್ರತಿಬಂಧಕ ಲಸಿಕೆ ಹಾಕಿಸಿಕೊಳ್ಳದವರಿಗೆ ಜಿಲ್ಲೆಯೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ. ದಾಖಲೆಗಳು ಇಲ್ಲದಿದ್ದರೆ ಮರಳಿ ಕಳಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

‘ಮುಂಬೈ–ಬೀದರ್, ಲಾತೂರ್‌– ಯಶವಂತಪುರ, ಔರಂಗಾಬಾದ್‌–ಹೈದರಾಬಾದ್, ನಾಂದೇಡ್–ಬೆಂಗಳೂರು ರೈಲುಗಳು ಬೀದರ್‌ ಮಾರ್ಗವಾಗಿ ಸಂಚರಿಸುತ್ತಿವೆ. ಹೀಗಾಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಚರಿಸುವ ಸರಕು ಸಾಗಣೆ ವಾಹನಗಳ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ. ಆದರೆ, ಲಾರಿಗಳಲ್ಲಿ ಪ್ರಯಾಣಿಕರು ಕಂಡು ಬಂದರೆ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದ ಪ್ರಮಾಣಪತ್ರ ಅಥವಾ 74 ಗಂಟೆ ಒಳಗೆ ಆರ್‌ಟಿಪಿಸಿಆರ್‌ ಮಾಡಿಸಿಕೊಂಡವರಿಗೆ ಮಾತ್ರ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುತ್ತಿದೆ.

‘ಜಿಲ್ಲೆಯ 8 ಚೆಕ್‌ಪೋಸ್ಟ್‌ಗಳು ಸಕ್ರಿಯವಾಗಿವೆ. 24 ಗಂಟೆಗಳ ಅವಧಿಯಲ್ಲಿ 3,080 ಜನರ ತಪಾಸಣೆ ಮಾಡಲಾಗಿದೆ. 210 ಜನರಿಗೆ ನೆಗಡಿ ಜ್ವರ ಇರುವುದು ಕಂಡು ಬಂದಿದೆ. ಚೆಕ್‌ಪೋಸ್ಟ್‌ಗಳಲ್ಲಿ 290 ಮಂದಿಯ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 870 ಜನರ ಮೂಗು ಹಾಗೂ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ.

ಹುಲಸೂರ ಚೆಕ್‌ಪೋಸ್ಟ್‌ನಿಂದ 35 ಹಾಗೂ ಔರಾದ್ ತಾಲ್ಲೂಕಿನ ವನಮಾರಪಳ್ಳಿ ಚೆಕಪೋಸ್ಟ್‌ನಿಂದ 26 ಪ್ರಯಾಣಿಕರನ್ನು ವಾಪಸ್ ಕಳುಹಿಸಲಾಗಿದೆ. ದಾಖಲೆ ಇಲ್ಲದೆ ಬಂದವರನ್ನು ಮುಲಾಜಿಲ್ಲದೆ ಮರಳಿ ಕಳಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.