ADVERTISEMENT

ಸಿಡಿಲು ಬಡಿದು ಇಬ್ಬರು ಸಾವು

ಜಿಲ್ಲೆಯ ವಿವಿಧೆಡೆ ಜಿಟಿ ಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 5:48 IST
Last Updated 10 ಮೇ 2021, 5:48 IST

ಬೀದರ್: ಜಿಲ್ಲೆಯ ವಿವಿಧೆಡೆ ಭಾನುವಾರ ಜಿಟಿ ಜಿಟಿ ಮಳೆಯಾಗಿದೆ. ಬೀದರ್, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಹುಲಸೂರು, ಕಮಲನಗರ ತಾಲ್ಲೂಕಿನ ವಿವಿಧೆಡೆ ಮಳೆ ಸುರಿದಿದೆ.

ಮಧ್ಯಾಹ್ನ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿತು. ಗುಡುಗು, ಮಿಂಚು ಕಾಣಿಸಿಕೊಂಡ ನಂತರ ಮಳೆ ಆರಂಭವಾಯಿತು.

ಬೀದರ್ ತಾಲ್ಲೂಕಿನ ಕಾಶೆಂಪೂರ್ (ಪಿ)ದಲ್ಲಿ ಹೊಲದ ಕೆಲಸ ಮಾಡುವಾಗ ಸಿಡಿಲು ಬಡಿದು ಚಿದಾನಂದ ಬಂಡೆಪ್ಪ (40) ಶನಿವಾರ ಮೃತಪಟ್ಟಿದ್ದಾರೆ.

ADVERTISEMENT

ಕಮಲನಗರ ತಾಲ್ಲೂಕಿನ ಧನಸಿಂಗ್ ತಾಂಡಾದಲ್ಲಿ ಭಾನುವಾರ ಹೊಲದಲ್ಲಿನ ಕಸಕಡ್ಡಿಗಳನ್ನು ಸ್ವಚ್ಛ ಮಾಡುತ್ತಿರುವಾಗ ವಿಜಯಕುಮಾರ ಶಂಕರ್ ರಾಠೋಡ್ (34) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಠಾಣಾಕುಶನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದ ಹೊರವಲಯದಲ್ಲಿ ಬಸವರಾಜ ಜ್ಞಾನೋಬಾ ಕೋಳಿ ಅವರ 9 ಆಡುಗಳು ಸಿಡಿಲು ಬಡಿದು ಸಾವನ್ನಪಿವೆ.

‘ಮುಧೋಳ(ಬಿ) ಗ್ರಾಮದ ಕುರಿಗಾಯಿ ಬಸವರಾಜ ಅವರು ಸೇರಿದ 30 ಆಡುಗಳನ್ನು ತೋರಣಾ-ಮುಧೋಳ ಗ್ರಾಮದ ಮಧ್ಯ ಮೇಯಿಸಲು ಹೋದಾಗ ಮಳೆ ಬಂದಿದೆ. ಮರದ ಕೆಳಗಡೆ ಆಸರೆ ಪಡೆದಾಗ ಸಿಡಿಲು ಬಡಿದು 9 ಆಡುಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಜಾನಂದ ವಟಗೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಠಾಣಾಕುಶನುರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಠಾಣಾಕುಶನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲಿಗೆ ಆಕಳು, ಎತ್ತು, ಹೋರಿ ಬಲಿ

ಭಾಲ್ಕಿ: ತಾಲ್ಲೂಕಿನ ಜೀರಗ್ಯಾಳ ಗ್ರಾಮದ ಆಕಳು ಮತ್ತು ಇಂಚೂರ ಗ್ರಾಮದ ಎತ್ತು ಹಾಗೂ ಹೋರಿ ಭಾನುವಾರ ಸಿಡಿಲಿಗೆ ಬಲಿಯಾಗಿವೆ.

ಜೀರಗ್ಯಾಳ ಗ್ರಾಮದ ಬಾಬುರಾವ್ ಭಾವುರಾವ್ ಟೇಕಳೆ ಅವರಿಗೆ ಸೇರಿದ್ದ ಅಂದಾಜು ₹50 ಸಾವಿರ ಮೌಲ್ಯದ ಆಕಳನ್ನು ಹೊಲದಲ್ಲಿ ಗಿಡದ ಆಸರೆಯಲ್ಲಿ ಕಟ್ಟಲಾಗಿತ್ತು. ಇಂಚೂರ ಗ್ರಾಮದ ರೈತ ದೇವಿದಾಸ ನಾರಾಯಣರಾವ್ ಬಿರಾದಾರ ಅವರಿಗೆ ಸೇರಿದ್ದ 60 ಸಾವಿರ ಮೌಲ್ಯದ ಎತ್ತು ಮತ್ತು ‌₹50 ಸಾವಿರಹೋರಿ ಸಿಡಿಲಿಗೆ ಬಲಿಯಾಗಿವೆ.

ಮೇಹಕರ ಪೋಲಿಸ್ ಠಾಣೆಯ ಪಿಎಸ್‍ಐ ನಂದಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.