ADVERTISEMENT

ಮಾಲಾಶ್ರೀ ಅಧ್ಯಕ್ಷೆ, ಸೌಭಾಗ್ಯವತಿ ಉಪಾಧ್ಯಕ್ಷೆ

ಪುರಸಭೆಗೆ ಅವಿರೋಧ ಆಯ್ಕೆ; ಕಾಂಗ್ರೆಸ್‌ಗೆ ಬಹುಮತ ಇದ್ದರೂ ದಕ್ಕದ ಅಧ್ಯಕ್ಷ ಸ್ಥಾನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:49 IST
Last Updated 8 ನವೆಂಬರ್ 2020, 3:49 IST
ಚಿಟಗುಪ್ಪ ಪುರಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್, ಉಪಾಧ್ಯಕ್ಷೆ ಸೌಭಾಗ್ಯವತಿ ಅಶೋಕ ಅವರನ್ನು ಸನ್ಮಾನಿಸಲಾಯಿತು. ಶಾಸಕ ರಾಜಶೇಖರ್ ಪಾಟೀಲ ಇದ್ದರು
ಚಿಟಗುಪ್ಪ ಪುರಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್, ಉಪಾಧ್ಯಕ್ಷೆ ಸೌಭಾಗ್ಯವತಿ ಅಶೋಕ ಅವರನ್ನು ಸನ್ಮಾನಿಸಲಾಯಿತು. ಶಾಸಕ ರಾಜಶೇಖರ್ ಪಾಟೀಲ ಇದ್ದರು   

ಚಿಟಗುಪ್ಪ: ಪಟ್ಟಣದ ಪುರಸಭೆಯ 9ನೇ ಅವಧಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ 22ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಮಾಲಾಶ್ರೀ ಶಾಮರಾವ್, ಉಪಾಧ್ಯಕ್ಷೆಯಾಗಿ 23ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಸೌಭಾಗ್ಯವತಿ ಅಶೋಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಯಾಗಿದ್ದ ತಹಶೀಲ್ದಾರ್ ಜಿಯಾವುಲ್‌ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನಂತರ ಶಾಸಕ ರಾಜಶೇಖರ್ ಪಾಟೀಲ ನೂತನ ಅಧ್ಯಕ್ಷೆ ಮಾಲಾಶ್ರೀ ಮತ್ತು ಉಪಾಧ್ಯಕ್ಷೆ ಸೌಭಾಗ್ಯವತಿ ಅವರನ್ನು ಸನ್ಮಾನಿಸಿ ಮಾತನಾಡಿ, ‘ಪಟ್ಟಣದ ಸಮಗ್ರ ಅಭಿಬೃದ್ಧಿಗೆ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಶ್ರಮಿಸಬೇಕು. ನಾಗರಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಪಟ್ಟಣದ ಅಗತ್ಯ ಕಾಮಗಾರಿಗಳಿಗೆ ಶಾಸಕರ ನಿಧಿಯಲ್ಲಿ ಹಣಕಾಸಿನ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ 13 ಸದಸ್ಯರ ಬಹುಮತ ಇದ್ದರೂ ಆಡಳಿತಾರೂಢ ಸರ್ಕಾರದ ಮೀಸಲಾತಿ ಕುತಂತ್ರದಿಂದಾಗಿ ಅಧ್ಯಕ್ಷ ಸ್ಥಾನ ಕೈತಪ್ಪಿದೆ. ಪ್ರಜಾಪ್ರಭುತ್ವದ ಆಡಳಿತಕ್ಕೆ ಇದು ಮಾರಕವಾಗಿದೆ’ ಎಂದುಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದುಳಿದ ಜನಾಂಗಕ್ಕೆ ಅಧಿಕಾರದ ಗದ್ದುಗೆ ಕೊಡುವ ಸಾಮಾಜಿಕ ನ್ಯಾಯ ಒದಗಿಸುವಕಾರ್ಯ ಬಿಜೆಪಿ ಸರ್ಕಾರ ಮಾಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಮೀಸಲಾತಿಯಲ್ಲಿ ಹಿಂದುಳಿದಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಿರಲಿಲ್ಲ ಎಂಬುದು ನಾಗರಿಕರು ಅರಿತುಕೊಳ್ಳಬೇಕು’ ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ್‍ ಹೇಳಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ ಪುರೋಹಿತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.