ADVERTISEMENT

ಬೀದರ್ | ಸಂಗೀತದ ರಸದೌತಣ ನೀಡಿದ ಜಿಲ್ಲೆಯ ಕಲಾವಿದರು

ನಮ್ಮೂರು ಸಂಗೋಳಗಿ ಹಬ್ಬದಲ್ಲಿ ಸಂಸ್ಕೃತಿಯ ಅನಾವರಣ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 13:51 IST
Last Updated 23 ಮಾರ್ಚ್ 2023, 13:51 IST
ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ನಡೆದ ‘ನಮ್ಮೂರು ಸಂಗೋಳಗಿ ಹಬ್ಬ’ದಲ್ಲಿ ಶಿವಾನಿ ಸ್ವಾಮಿ ಹಾಡು ಹಾಡಿದರು
ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ನಡೆದ ‘ನಮ್ಮೂರು ಸಂಗೋಳಗಿ ಹಬ್ಬ’ದಲ್ಲಿ ಶಿವಾನಿ ಸ್ವಾಮಿ ಹಾಡು ಹಾಡಿದರು   

ಸಂಗೋಳಗಿ (ಬೀದರ್): ಮಹಾ ಸೂಫಿ ಸಂತ ಖುತುಬಿ ಸಾಹೇಬರ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಬೀದರ್ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಎರಡು ದಿನ ಸೌಹಾರ್ದತೆಯ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಿಲ್ಲೆಯ ಕಲಾವಿದರು ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದರು.

ಎಸ್‌.ಎಸ್‌. ಮೆಲೋಡಿ ಮ್ಯುಸಿಕ್‌ ಹಾಗೂ ಸಂಗೀತ ವಿದ್ಯಾಲಯದ ಪಂಡಿತ ಶಿವದಾಸ ಸ್ವಾಮಿ ನೇತೃತ್ವದಲ್ಲಿ ಗಾಯಕಿ ಶಿವಾನಿ ಸ್ವಾಮಿ ಅವರು ಜನಪ್ರಿಯ ಗೀತೆಗಳಾದ ‘ಯಾಕೆ ಬಡದಾಡ್ತಿ ತಮ್ಮ...’, ‘ಹರ ಹರ ಶಂಭೋ, ಶಂಭೋ, ಶಂಭೋ ಮಹಾದೇವ..’, ‘ಪುಷ್ಪಾ ಚಿತ್ರದ ‘ಸ್ವಾಮಿ ಸ್ವಾಮಿ...’, ‘ಕಣ್ಣು ಹೊಡಿಯಾಕ್‌ ಮೊನ್ನೆ ಕಲಿತೀನಿ...’ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಸಂಗೀತ ಲೋಕದಲ್ಲಿ ತೇಲಿಸಿದರು.

ಶಿವಂ ಡೋಲಕಿ ಹಾಗೂ ಸತ್ಯಂ ಅವರು ಮೆಲೊಡಿಕಾ ನುಡಿಸಿದರು. ಕವಿತಾ ಸ್ವಾಮಿ ಅವರು ‘ಊರ ಮುಂದಿನ ಬಾವಿ...’ ಜಾನಪದ ಗೀತೆ ಹಾಡಿದರು.

ADVERTISEMENT

ಕಲಾವಿದ ನಾಗರಾಜ್ ಜೋಗಿ ಅವರು ‘ಕಲ್ಯಾಣವೆಂಬ ಪ್ರಣತೆಯಲ್ಲಿ....’ ವಚನ, ‘ಹಾಡಿದೊಡೆ ಎನ್ನೊಡೆಯನ ಹಾಡುವೆ..., ‘ಸಿಂಗಾರ ಸಿರಿಯೇ... ಅಂಗಾಲಿನ ಮೇಲೆ....’, ಶಿಲ್ಪಾ ಸ್ವಾಮಿ ಸಾಥ್‌ ನೀಡಿದರು. ದತ್ತಾತ್ರೇಯ ಸೋಳಂಕೆ ‘ಜನಮ ನೀಡುತ್ತಾಳೆ ನಮ್ಮ ತಾಯಿ..’ ಹಾಡಿದರು. ಆನಂದ ಸ್ವಾಮಿ ಅವರು ಪುಷ್ಪಾ ಚಿತ್ರದ ‘ನೋಟ ಬಂಗಾರವಾಯಿತೇ ಶ್ರೀವಲ್ಲಿ...’ ಹಾಡಿ ಪ್ರೇಕ್ಷಕರ ಮನ ರಂಜಿಸಿದರು.

ರಘು ಪ್ರಿಯಾ ದಂಪತಿ ಬಿದಿರಿ ಕನ್ನಡ ಭಾಷೆಯಲ್ಲಿ ಹಾಗೂ ಮಧು ಜಮಖಂಡಿ ತಂಡ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿತು. ಹಾಸ್ಯ ಕಲಾವಿದ ನವಲಿಂಗ ಹಾಸ್ಯ ಭರಿತ ಪ್ರಾಸ ಬದ್ಧ ಶಬ್ದಗಳನ್ನು ಮಾತಿನ ಸರಮಾಲೆಯಲ್ಲಿ ಜೋಡಿಸುತ್ತ ಗ್ರಾಮೀಣ ಸೊಗಡಿನಲ್ಲಿ ಪ್ರೇಕ್ಷಕರ ಮನ ತಣಿಸಿದರು.

ನೃತ್ಯಾಂಗಣ ನಾಟ್ಯ ಮತ್ತು ಕಲಾ ಕೇಂದ್ರದ ಕಲಾವಿದರು ಯುಗಾದಿ ಪ್ರಯುಕ್ತ ಜನಪದ ನೃತ್ಯ ಪ್ರದರ್ಶಿಸಿದರು. ಹಬ್ಬದ ಅಂಗವಾಗಿ ಗ್ರಾಮದ ಖುತುಬಿ ಸಾಹೇಬರ ದರ್ಗಾದಲ್ಲಿ ಯುಗಾದಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕವ್ವಾಲಿ, ಪಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಂಡು ಗ್ರಾಮದ ಜನ ಸೌಹಾರ್ದತೆ ಮೆರೆದರು. ಗುರುವಾರ ಬೆಳಿಗ್ಗೆ ಜಂಗಿ ಕುಸ್ತಿ ಸ್ಪರ್ಧೆಗಳು ನಡೆದವು


ಕಾರ್ಯಕ್ರಮ ಉದ್ಘಾಟನೆ

ನಮ್ಮೂರು ಸಂಗೋಳಗಿ ಹಬ್ಬ–2023 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಜಾವಾಣಿ ಜಿಲ್ಲಾ ವರದಿಗಾರ ಚಂದ್ರಕಾಂತ ಮಸಾನಿ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ, ಜೆ.ಟಿ.ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದ ಗೌರವ ಕಾರ್ಯದರ್ಶಿ ಟಿ.ಎಂ.ಮಚ್ಚೆ, ಗ್ರಾಮದ ಪ್ರಮುಖರಾದ ಚಂದ್ರಶೇಖರ ಚನಶೆಟ್ಟಿ, ವಿದ್ಯಾಸಾಗರ ಪಾಟೀಲ, ಅನಿಲಕುಮಾರ ಪಾಟೀಲ, ಭೀಮರಾವ ಗುತ್ತಿ, ಬಾಬುರಾವ್ ಮಾಳೆಗಾಂವ, ಶಿವಕುಮಾರ ಮಾಲಿಪಾಟೀಲ, ಭಾನುದಾಸ ಮಾಳೆಗಾರ, ದತ್ತು ಗುತ್ತಿ, ಓಂನಾಥ ಬಿರಾದಾರ, ಜಗನ್ನಾಥ ಚಟ್ನಳ್ಳಿ, ಗೋವಿಂದ ಭೈರಿ, ನಾಗಶೆಟ್ಟಿ ಚನಶೆಟ್ಟಿ, ಶಿವಕುಮಾರ ತುಪ್ಪದ ಇದ್ದರು.

ಶಾಸಕ ಬಂಡೆಪ್ಪ ಕಾಶೆಂಪೂರ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಟೋಕರೆ ಕೋಳಿ ಸಮಾಜದ ಮುಖಂಡ ಜಗನ್ನಾಥ ಜಮಾದಾರ್, ಚಲನಚಿತ್ರ ನಿರ್ಮಾಪಕ ಬಿ.ಜೆ. ವಿಷ್ಣುಕಾಂತ. ಉಮೇಶ ಸಲಗರ, ಜಾತ್ರಾ ಮಹೋತ್ಸವ ಸಮಿತಿಯ ಪ್ರಮುಖರಾದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಮುಖರಾದ ಶಿವಕುಮಾರ ಕಾಶೆಂಪುರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.