ADVERTISEMENT

ಪಂಚಭೂತಗಳೆಲ್ಲ ಶುದ್ಧವಾಗಿಡುವುದೇ ಪರಿಸರ ಸಂರಕ್ಷಣೆ: ಪ್ರಾಚಾರ್ಯ ಬಸವರಾಜ ಬಲ್ಲೂರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 14:07 IST
Last Updated 26 ಜೂನ್ 2025, 14:07 IST
ಜಾಗತಿಕ ಲಿಂಗಾಯತ ಮಹಾಸಭಾ ಬೀದರ್‌ ಜಿಲ್ಲಾ ಘಟಕದಿಂದ ಬೀದರ್‌ನ ಗಾಂಧಿ ಗಂಜ್‌ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ 4ನೇ ವಚನ ಮಂಟಪ ಕಾರ್ಯಕ್ರಮದಲ್ಲಿ ಭಾತಂಬ್ರಾ ಮಠದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು
ಜಾಗತಿಕ ಲಿಂಗಾಯತ ಮಹಾಸಭಾ ಬೀದರ್‌ ಜಿಲ್ಲಾ ಘಟಕದಿಂದ ಬೀದರ್‌ನ ಗಾಂಧಿ ಗಂಜ್‌ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ 4ನೇ ವಚನ ಮಂಟಪ ಕಾರ್ಯಕ್ರಮದಲ್ಲಿ ಭಾತಂಬ್ರಾ ಮಠದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು   

ಬೀದರ್‌: ‘ಪಂಚಭೂತಗಳೆಲ್ಲವೂ ಪರಿಶುದ್ಧವಾಗಿ ಇಡುವುದೇ ನಿಜವಾದ ಪರಿಸರ ಸಂರಕ್ಷಣೆ ಎಂದು ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿಯೇ ಹೇಳಿದ್ದರು’ ಎಂದು ಕರ್ನಾಟಕ ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಬೀದರ್‌ ಜಿಲ್ಲಾ ಘಟಕದಿಂದ ನಗರದ ಗಾಂಧಿ ಗಂಜ್‌ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ 4ನೇ ‘ವಚನ ಮಂಟಪ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಪ್ರತಿನಿತ್ಯ ವಿಷಕಾರಿ ಆಹಾರ ಸೇವಿಸುತ್ತಿದ್ದೇವೆ. ಪ್ಲಾಸ್ಟಿಕ್‌ ಬಳಕೆ ನಿಷೇಧ ಕಡತದಲ್ಲಿ ಇರಬಾರದು. ಸರ್ಕಾರ ಅದನ್ನು ನಿಯಂತ್ರಿಸುತ್ತದೆ ಎನ್ನುವ ಮನೋಭಾವ ಬದಲಾಗಿ, ಪ್ರತಿಯೊಬ್ಬರೂ ಪ್ಲಾಸ್ಟಿಕ್‌ ಬಳಕೆ ತ್ಯಜಿಸಲು ಪಣ ತೊಡಬೇಕು. ಆಗ ಪಂಚಭೂತಗಳೆಲ್ಲ ಶುದ್ಧವಾಗಿರುತ್ತವೆ ಎಂದರು.

ADVERTISEMENT

ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ನಾವು ಪರಿಸರದೊಂದಿಗೆ ಬದುಕಬೇಕು. ಅದು ಸದಾಶಯದೊಂದಿಗೆ. ಅಂದಾಗ ನಮ್ಮ ಎಲ್ಲ ಆಸೆಗಳು ಪೂರೈಕೆಯಾಗುತ್ತವೆ. ಪರಿಸರವೆಂದರೆ ಕೇವಲ ಸುತ್ತಲಿನ ಭೂಮಿ ಮಾತ್ರವಲ್ಲ. ಪಂಚಭೂತಗಳೊಂದಿಗೆ ಚರಾಚರ ವಸ್ತುಗಳೆಲ್ಲ ಸೇರಿದ ಅಖಂಡ ವಿಶ್ವ. ಆದರೆ, ದುರಂತದ ಸಂಗತಿಯೆಂದರೆ ನಮ್ಮ ಪಂಚಭೂತಗಳು ಇಂದು ಅತ್ಯಂತ ಕಲುಷಿತವಾಗಿವೆ. ಪರಿಸರ ವಿಜ್ಞಾನಿಗಳು ನಿರಂತರ ಎಚ್ಚರಿಸುತ್ತಿದ್ದಾರೆ. ಆದರೂ ನಾವು ಎಚ್ಚರಗೊಂಡಿಲ್ಲ ಎಂದು ವಿಷಾದಿಸಿದರು.

ಭೂಮಿ ಬಿಸಿಯಾಗುತ್ತಿದೆ. ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಋತುಮಾನಗಳು ಬದಲಾಗುತ್ತಿವೆ. ಹಿಮ ಕರಗುತ್ತಿದೆ. ಹೀಗೆ ಅನೇಕ ರೀತಿಯ ಬದಲಾವಣೆಗಳು ನಮ್ಮ ಪರಿಸರದಲ್ಲಾಗುತ್ತಿವೆ ಎಂದರು.

ಭಾತಂಬ್ರಾ ಮಠದ ಶಿವಯೋಗಿಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ಮನದೀಪ ಕೌರ್‌ ಕಾರ‍್ಯಕ್ರಮ ಉದ್ಘಾಟಿಸಿದರು. ಮನದೀಪ ಕೌರ್ ಹಾಗೂ ಮನಪ್ರೀತ ಸಿಂಗ್ ದಂಪತಿ, ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿಗೆ ಆಯ್ಕೆಯಾದ ಸುವರ್ಣಾ ಚಿಮಕೋಡೆ ಅವರನ್ನು ಸನ್ಮಾನಿಸಲಾಯಿತು.

ಯೋಗೇಶ ಶ್ರೀಗಿರಿ ಭಕ್ತಿ ದಾಸೋಹ ನೆರವೇರಿಸಿದರು. ಮಹಾಸಭಾ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ, ಬಸವರಾಜ ಜಕ್ಕಾ, ಯೋಗೇಂದ್ರ ಯದಲಾಪೂರೆ ಮತ್ತಿತರರು ಹಾಜರಿದ್ದರು. ಅಶ್ವಿನಿ ರಾಜಕುಮಾರ ವಚನ ಗಾಯನ ನೆರವೇರಿಸಿದರು. ಅರಣ್ಯ ಇಲಾಖೆಯ ಸಹಕಾರದಿಂದ 250 ಸಸಿಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.