ಭಾಲ್ಕಿ: ‘ಲಿಂಗಾಯತರು ಬಸವಣ್ಣನವರನ್ನೇ ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥವೆಂದು ಒಪ್ಪುತ್ತಾರೆ. ಆದರೆ, ವೀರಶೈವರು ರೇಣುಕಾದಿ ಪಂಚಾಚಾರ್ಯರಿಗೆ ಪ್ರಾಮುಖ್ಯ ನೀಡಿ ಬಸವಣ್ಣನವರಿಗೆ ಧರ್ಮ ಸುಧಾರಕ. ಸಂಸ್ಕೃತದಲ್ಲಿ ಬರೆದಿರುವ ಆಗಮಗಳು, ಸಿದ್ಧಾಂತ ಶಿಖಾಮಣಿ ತಮ್ಮ ಧರ್ಮದ ಗ್ರಂಥವೆಂದು ಹೇಳುತ್ತಾರೆ. ಹೀಗಾಗಿ, ವೀರಶೈವ, ಲಿಂಗಾಯತ ಎರಡೂ ಭಿನ್ನವಾಗಿರುವ ಪ್ರವಾಹಗಳು’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.
‘ಬಸವಾದಿ ಶರಣರ ತತ್ವಾದರ್ಶಗಳನ್ನೇ ಒಪ್ಪಿಕೊಂಡಿರುವ ಲಿಂಗಾಯತ ಹಾಗೂ ವೇದ ಆಗಮ, ಉಪನಿಷತ್ತಗಳ ಜೊತೆಗೆ ಪಂಚಾಚಾರ್ಯರು ಒಪ್ಪುವ ವೀರಶೈವರು ಒಂದೇ ಹೇಗೆ ಆಗುತ್ತಾರೆ ಎಂದು ಪಟ್ಟದ್ದೇವರು ಪ್ರಶ್ನಿಸಿದ್ದಾರೆ. ತಾತ್ವಿಕವಾಗಿ ಎರಡೂ ಒಂದೇ ಆಗಲು ಸಾಧ್ಯವೇ ಇಲ್ಲ. ಸಾಮಾಜಿಕ ದೃಷ್ಟಿಯಿಂದ ನೋಡಿದರೆ ನಾವು ಇಲ್ಲಿಯವರೆಗೆ ಲಿಂಗಾಯತರು ಎಂದೇ ಗುರುತಿಸಲ್ಪಟ್ಟಿದ್ದೇವೆ. ಅನ್ಯ ಸಮಾಜದವರು ನಮ್ಮನ್ನು ಲಿಂಗಾಯತರು ಎಂದೇ ಗುರುತಿಸುತ್ತಾರೆ. ನಮ್ಮ ಎಲ್ಲಾ ಹಳೇ ದಾಖಲಾತಿಗಳಲ್ಲಿ ಲಿಂಗಾಯತ ಹೆಸರೇ ಇರುವಾಗ, ವೀರಶೈವ ಎಂಬ ಬಾಲ ನಮಗೇಕೆ ಬೇಕು? ವೀರಶೈವ ಎಂಬುದು ಇತ್ತೀಚಿನ ದಿನಗಳಲ್ಲಿ ಸೇರಿದ ಒಂದು ಪದ. ಲಿಂಗಾಯತರಲ್ಲಿ ಇರುವ 102 ಒಳಪಂಗಡಗಳಲ್ಲಿ ಅದೂ ಒಂದು ಒಳಪಂಗಡ ಅಷ್ಟೇ. ಒಂದೇ ಪಂಗಡದ ಹೆಸರಿಗೆ ಇಡೀ ಸಮುದಾಯ ಬಲಿ ಕೊಡುವುದು ನಿಜಕ್ಕೂ ನೋವಿನ ಸಂಗತಿ’ ಎಂದು ಹೇಳಿದ್ದಾರೆ.
ಸಮಾಜದ ಬಗ್ಗೆ ಕಾಳಜಿ ಇರುವ ಮಹಾಸಭೆ ಎರಡೂ ಒಂದೇ ಎನ್ನುವ ಭ್ರಮೆಯಿಂದ ಹೊರಬಂದು ವಾಸ್ತವ ಮತ್ತು ಸಂವಿಧಾನಾತ್ಮಕ ವಿಷಯಗಳನ್ನು ಅರ್ಥೈಸಿಕೊಳ್ಳಬೇಕು. ಸ್ವಂತ ಪ್ರತಿಷ್ಠೆ ಬಿಟ್ಟು ತಾವೇ ಪ್ರಾರಂಭಿಸಿದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದ ನೇತೃತ್ವ ವಹಿಸಿ ಸಮಾಜದ ಸಮಗ್ರ ಹಿತವನ್ನು ಕಾಪಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.