ಬೀದರ್: ‘ಮಹಾನ ವ್ಯಕ್ತಿಗಳ ಜಯಂತಿಯನ್ನು ಆಚರಿಸುವ ಉದ್ದೇಶವೆಂದರೆ ಇತರೆ ಸಮಾಜದೊಂದಿಗೆ ಪೈಪೋಟಿ ಮಾಡುವುದಲ್ಲ. ಬದಲಾಗಿ ಆ ಮಹಾನ ವ್ಯಕ್ತಿಯ ಬದುಕಿನ ಆದರ್ಶಗಳನ್ನು ಸ್ಮರಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಹಾಯೋಗಿ ವೇಮನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜಗತ್ತಿನ ಅನೇಕ ಶರಣರು, ದಾರ್ಶನಿಕರು ಸಮಾಜದ ಒಳಿತಿಗಾಗಿ ಶ್ರಮಿಸಿದ್ದಾರೆ. ಜನರ ಉದ್ಧಾರಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಮಹಾಪುರುಷರ ಮತ್ತು ಆದರ್ಶಗಳ ದಾರಿಯಲ್ಲಿ ನಡೆಯಬೇಕು’ ಎಂದು ನುಡಿದರು.
‘ರೆಡ್ಡಿ ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾದವರೂ ಬಹಳಷ್ಟು ಜನರಿದ್ದಾರೆ. ಆದ್ದರಿಂದ ಎಲ್ಲರೂ ಶಿಕ್ಷಣವನ್ನು ಪಡೆದು ಸಂಘಟಿತರಾಗಬೇಕು. ರೆಡ್ಡಿ ಸಮಾಜದ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡಲು ನಾನು ಸದಾಸಿದ್ಧನಿದ್ದೇನೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ,‘ಮಹಾನ ಪುರುಷರು ಹಾಕಿಕೊಟ್ಟ ದಾರಿಯಲ್ಲಿ ಜೀವನ ಸಾಗಿಸಬೇಕು. ಅಂದಾಗ ಮಾತ್ರ ಅವರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.
ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಧನರಾಜ ರೆಡ್ಡಿ, ಉಪನ್ಯಾಸ ನೀಡಿ ವೇಮನ್ ಅವರು ರಾಜ ಮನೆತನದಲ್ಲಿ ಜನಿಸಿದರು. ಸಮಾಜಕ್ಕಾಗಿ ವೈಭೋಗವನ್ನೇ ತ್ಯಾಗ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು’ ಎಂದು ಹೇಳಿದರು.
‘ಆತ್ಮ ಶುದ್ಧಿ ಇಲ್ಲದ ಆಚಾರವೇಕೆ, ಮಡಿವಂತಿಕೆ ಶುದ್ಧಿ ಅಡುಗೆ ಏಕೆ ಎಂಬ ವೇಮನರ ವಚನದಂತೆ, ಆತ್ಮ, ಮನಸ್ಸು, ಆಚಾರ. ವಿಚಾರ ನಿಷ್ಠೆ, ಕಾಯಕಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ’ ಎಂದು ತಿಳಿಸಿದರು.
ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಸಿದ್ಧಲಿಂಗ ರೆಡ್ಡಿ ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಮುಖಂಡ ನಾಗೇಶ ರೆಡ್ಡಿ, ಗುರುನಾನಕ ಪ್ರಬಂಧ ಕಮಿಟಿಯ ದರ್ಬಾರಾ ಸಿಂಗ್, ರೆಡ್ಡಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರರೆಡ್ಡಿ ಚಿಟ್ಟಾ, ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ ರೆಡ್ಡಿ, ಮಹೇಶ ಪಾಲಂ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಬರೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.