ಬಸವಕಲ್ಯಾಣ (ಬೀದರ್ ಜಿಲ್ಲೆ): ಕಾಡು ಪ್ರಾಣಿಗಳನ್ನು ಬೇಟೆಯಾಡಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಬಂಧಿಸಿದೆ.
ಘೋಟಾಳವಾಡಿ ಗ್ರಾಮದ ಅಖಿಲೇಶ ಹಾಡೋಳೆ ಬಂಧಿತ ಆರೋಪಿ.
ಆರೋಪಿ ಲಾಡವಂತಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ, ಮುಳ್ಳುಹಂದಿ ಹಾಗೂ ಮೊಲಗಳನ್ನು ಬೇಟೆಯಾಡಿ ಅದನ್ನು ಟಿಕ್ಟಾಕ್ ಮೂಲಕ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯ ವಿಳಾಸ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಬೈಕ್ ಮತ್ತು ಮೊಬೈಲ್ ಜಪ್ತಿ ಮಾಡಿದ್ದಾರೆ.
ವಲಯ ಅರಣ್ಯಾಧಿಕಾರಿ ಮಹೇಂದ್ರ ಮೌರ್ಯ ನೇತೃತ್ವದಲ್ಲಿ ಉಪ ಅರಣ್ಯಾಧಿಕಾರಿ ಸಂತೋಷ ಯಾಚೆ, ಸಿಬ್ಬಂದಿ ನಿಸಾರ್, ಪ್ರಶಾಂತ, ಶಿವಕುಮಾರ, ವೀರಭದ್ರ, ಪ್ರವೀಣ ಹಾಗೂ ಸೂರ್ಯಕಾಂತ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.