ಕಲಬುರ್ಗಿ: ಮೊಬೈಲ್ ಕದ್ದು ಓಡುತ್ತಿದ್ದ ವೇಳೆ ಬಾವಿಗೆ ಬಿದ್ದ ಯುವಕನ ಪತ್ತೆ ಮಂಗಳವಾರವೂ ಸಾಧ್ಯವಾಗಲಿಲ್ಲ. ಬುಧವಾರ (ಜುಲೈ 28) ಮತ್ತೆ ಶೋಧ ಕಾರ್ಯ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಪಬ್ಲಿಕ್ ಗಾರ್ಡನ್ನಲ್ಲಿ ಸೋಮವಾರ ಸಂಜೆ ಯುವಕನೊಬ್ಬ ವಾಯುವಿಹಾರಕ್ಕೆ ಬಂದವರ ಮೊಬೈಲ್ ಕಿತ್ತುಕೊಂಡು ಓಡುತ್ತಿದ್ದ. ಆತನನ್ನು ಹಿಡಿಯಲು ಕೆಲವರು ಹಿಂದೆ ಓಡಿದರು. ಈ ವೇಳೆ ಪ್ರಾಣಿ ಸಂಗ್ರಹಾಲಯದ ಎದುರಿಗೆ ಇರುವ ಅಗಲವಾದ ಬಾವಿಯಲ್ಲಿ ಬಿದ್ದ ಎಂದು ಆತನನ್ನು ಹಿಂಬಾಲಿಸಿದವರು ಹೇಳಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾವಿಯಲ್ಲಿ ಬೆಳಕು ಬಿಟ್ಟು ಪರಿಶೀಲಿಸಿದರು. ಯುವಕನ ಸುಳಿವು ಸಿಗಲಿಲ್ಲ. ಮಂಗಳವಾರ ಮೋಟಾರ್ ಮೂಲಕ ಬಾವಿಯಲ್ಲಿನ ನೀರನ್ನು ತೆಗೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಕೆಯಲ್ಲಿಲ್ಲದ ಈ ಬಾವಿಯಲ್ಲಿ ಸಾಕಷ್ಟು ಕಸ ಬೆಳೆದಿದ್ದು, ಹೂಳು ತುಂಬಿದ್ದರಿಂದ ಕಾರ್ಯಾಚರಣೆ ಅರ್ಧಕ್ಕೆ ಬಿಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.