ಹುಬ್ಬಳ್ಳಿ: ಬಿಜೆಪಿ ವತಿಯಿಂದ ಸೇವಾ ಸಪ್ತಾಹದಂಗವಾಗಿ ಪಂಂಡಿತ್ ದೀನ್ ದಯಾಳ್ ಉಪಾಧ್ಯಾಯ, ಮಹಾತ್ಮ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಜನ್ಮ ದಿನ ಅಂಗವಾಗಿ ಪ್ರತಿ ಮಂಡಲದಲ್ಲಿ 70 ಮಂದಿಗೆ ಕೃತಕ ಅಂಗ ಜೋಡಣಾ ಉಪಕರಣ, ಉಚಿತ ಕನ್ನಡಕ, 70 ಮಂದಿಗೆ ಪ್ಲಾಸ್ಮಾ ದಾನ, ಒಂದು ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದರು.
ಪ್ರತಿ ಮತಗಟ್ಟೆಯಲ್ಲಿ 70 ಸಸಿ ನೆಡುವುದು, ಜಿಲ್ಲಾ ಕೇಂದ್ರದ 70 ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಗಳು ಸೆ.20ರವರೆಗೆ ನಡೆಯಲಿವೆ ಎಂದು ಹೇಳಿದರು.
ಸೆ.25 ರಂದು ಪಂ. ದೀನ್ದಯಾಳ್ ಜಯಂತಿ ವೆಬಿನಾರ್ ಮೂಲಕ ಉಪನ್ಯಾಸ ಏರ್ಪಡಿಸುವುದು. ಮಹಾತ್ಮ ಗಾಂಧಿ ಅವರ ಜನ್ಮ ದಿನ ಅಂಗವಾಗಿ ಖಾದಿ ಪ್ರೋತ್ಸಾಹಿಸಲು ಅ.2 ರಂದು ಖಾದಿ ಬಟ್ಟೆಗಳನ್ನು ಧರಿಸಲಾಗುವುದು ಎಂದರು.
ಆತ್ಮನಿರ್ಭರ್ ಪ್ಯಾಕೇಜಿನಡಿ ಪ್ರಧಾನಿ ಮೋದಿ ಅವರು ಘೋಷಿಸಿದ್ದ ₹20 ಲಕ್ಷ ಕೋಟಿ ಯೋಜನೆ ಬಗೆಗೆ ಪ್ರಚಾರ ಮಾಡುವುದು. ಯೋಜನೆ ಅವರಿಗೆ ತಲುಪುವಂತೆ ಮಾಡಲಾಗುವುದು. ಜತೆಗೆ ಉಪನ್ಯಾಸಗಳನ್ನೂ ಏರ್ಪಡಿಸಲಾಗುವುದು ಎಂದು ಹೇಳಿದರು.
ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ, ರವಿ ನಾಯ್ಕ, ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.