ADVERTISEMENT

ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್

ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:22 IST
Last Updated 12 ನವೆಂಬರ್ 2019, 16:22 IST
ಮಡಿಕೇರಿಯಲ್ಲಿ ಮಂಗಳವಾರ ನಡೆದ ರಕ್ತದಾನ ಶಿಬಿರಕ್ಕೆ ಶಾಸಕ ಎಂ.‍ಪಿ.ಅಪ್ಪಚ್ಚು ರಂಜನ್‌ ಚಾಲನೆ ನೀಡಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ರಕ್ತದಾನ ಶಿಬಿರಕ್ಕೆ ಶಾಸಕ ಎಂ.‍ಪಿ.ಅಪ್ಪಚ್ಚು ರಂಜನ್‌ ಚಾಲನೆ ನೀಡಿದರು   

ಮಡಿಕೇರಿ: ‘ಯುವಜನರು ಪೌಷ್ಟಿಕ ಆಹಾರ ಸೇವಿಸಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ. ಇದರಿಂದ ಬೇರೆಯವರ ಪ್ರಾಣ ಉಳಿಸುವುದಲ್ಲದೆ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ವಾಹನ ಚಾಲನೆ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತಾಗಬೇಕು. ಇಲ್ಲದಿದ್ದಲ್ಲಿ ತಲೆಭಾಗಕ್ಕೆ ಗಾಯವಾಗುತ್ತದೆ. ಇದರಿಂದ ರಕ್ತಸ್ರಾವವಾಗುತ್ತದೆ. ಆದ್ದರಿಂದ, ಎಲ್ಲರೂ ಪ್ರಥಮ ಚಿಕಿತ್ಸೆ ಕಲಿಯಬೇಕು’ ಎಂದು ಶಾಸಕರು ಸಲಹೆ ಮಾಡಿದರು.

ADVERTISEMENT

‘ಯೋಗ, ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದರಿಂದ ಯಾವುದೇ ಕಾಯಿಲೆ ಬರುವುದಿಲ್ಲ. ಆರೋಗ್ಯವೇ ಭಾಗ್ಯ. ಆದ್ದರಿಂದ, ಆರೋಗ್ಯ ಕಾಪಾಡಿಕೊಳ್ಳಿ, ಶ್ರಮದಿಂದ ಕೆಲಸ ಮಾಡಿದರೆ ಗೆಲುವು ಇರುತ್ತದೆ’ ಎಂದರು.

ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ‘ರಕ್ತದಾನ ಮಹಾದಾನ. ರಕ್ತದಾನದಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ರಕ್ತ ಒದಗಿಸಲು ಸಹಕಾರಿಯಾಗುತ್ತದೆ. ಇದರಿಂದ ಪ್ರಾಣ ಉಳಿಸಬಹುದು’ ಎಂದು ಹೇಳಿದರು.

‘ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಯುವಜನರು ರಕ್ತದಾನ ಮಾಡುವ ಗುಣವನ್ನು ಬೆಳಸಿಕೊಳ್ಳಬೇಕು. ಇದರಿಂದ ಆರೋಗ್ಯವಂತರಾಗಿರಬಹುದು’ ಎಂದು ವೈದ್ಯ ಡಾ.ಎನ್‌.ಆನಂದ್‌ ಹೇಳಿದರು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ, ‘18–20 ವರ್ಷದವರೆಗೆ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ದೇಹದಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಕಾಯಿಲೆಗಳು ಬಾರದಂತೆ ರಕ್ಷಿಸುತ್ತದೆ’ ಎಂದು ಅವರು ಹೇಳಿದರು.

ಅತಿ ಹೆಚ್ಚು ರಕ್ತದಾನ ಮಾಡಿರುವ ಸುದೀಂಧ್ರ, ಡಾ.ಆನಂದ್, ಭಾಗ್ಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದಿರುವ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ ಚೇತನ್ ಕೆ.ಎನ್, ಕಾರ್ತಿಕ್ ನಾಚಪ್ಪ, ನೂತನ್ ಎನ್.ಎನ್ ಅವರಿಗೆ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.