ಚಿಂಚೋಳಿ: ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಕಲಬುರ್ಗಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಬಿಜೆಪಿ ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ತಿಳಿಸಿದರು.
ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮದ ಹಿರೇಮಠದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವರಿಷ್ಠರು ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ, ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಶಾಸಕರೊಬ್ಬರು ಸಚಿವರಾಗುವ ವಿಶ್ವಾಸವಿದೆ ಎಂದರು.
ಪಕ್ಷ ನಮಗೆ ತಾಯಿ ಸಮಾನ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರ ಶ್ರಮವನ್ನು ಪಕ್ಷ ಗುರುತಿಸಲಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಬಿಜೆಪಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಜಗತ್ತಿನ ಅತಿದೊಡ್ಡ ಪಕ್ಷವಾಗಿ ಬೆಳೆಯಲು ಕಾರ್ಯಕರ್ತರ ಪಾತ್ರ ಬಹಳಷ್ಟಿದೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಬೆಳೆಸಿದರೆ ಮುಂದಿನ ಚುನಾವಣೆಗಳಲ್ಲಿ ನಾವು ಗೆಲ್ಲಲು ಸುಲಭವಾಗುತ್ತದೆ ಎಂದರು.
ಸ್ಥಳೀಯ ಹಿರೇಮಠದ ವಿಜಯ ಮಹಾಂತ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಡೋಣಿ ಉಪನ್ಯಾಸ ನೀಡಿದರು.
ಪ್ರಶಿಕ್ಷಣ ಕೋಷ್ಠದ ರಾಜ್ಯ ಪ್ರಮುಖರಾದ ಸಂಜಯ ಮಿಸ್ಕಿನ್, ಸೂರ್ಯಕಾಂತ ಡೋಣಿ, ಮುಖಂಡರಾದ ಶರಣಪ್ಪ ತಳವಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಮೇಶ ಧುತ್ತರಗಿ, ಮುಖಂಡರಾದ ಲಕ್ಷ್ಮಣ ಅವುಂಟಿ, ಉಮಾ ಪಾಟೀಲ, ಬಾಬುರಾವ ಪಾಟೀಲ,ರಾಮಲಿಂಗಾರೆಡ್ಡಿ ದೇಶಮುಖ್, ಶಶಿಕಲಾ ಟೆಂಗಳಿ, ರಮೇಶ ಧುತ್ತರಗಿ, ರಮೇಶ ಪಡಶೆಟ್ಟಿ, ಗುಂಡಪ್ಪ, ಭೀಮಶೆಟ್ಟಿ ಮುಕ್ಕಾ, ಭೀಮಶೆಟ್ಟಿ ಮುರುಡಾ, ನಾಗಪ್ಪ ಕೊಳ್ಳಿ, ಉಮಾ ಪಾಟೀಲ, ಲಕ್ಷ್ಮಣ ಅವುಂಟಿ ಹಾಗೂ ಪ್ರಮುಖರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.