ADVERTISEMENT

ಅಬ್ದುಲ್ ಕಲಂ ಆಜಾದ್ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 5:55 IST
Last Updated 13 ನವೆಂಬರ್ 2012, 5:55 IST

ಚಾಮರಾಜನಗರ: ಮೌಲಾನ ಅಬ್ದುಲ್ ಕಲಂ ಆಜಾದ್ ಅವರು ಶಿಕ್ಷಣ ಬಗ್ಗೆ ತಮ್ಮದೇ ಆದ ದೃಷ್ಟಿಕೋನ ಹೊಂದಿದ್ದರು ಎಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಾದುಲ್ಲ ತಿಳಿಸಿದರು.

ನಗರದ ಗಾಳೀಪುರ ಬಡಾವಣೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಮೌಲಾನಾ ಅಬ್ದುಲ್ ಕಲಂ ಆಜಾದ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರು, ಬ್ರಿಟೀಷರು ದೇಶವನ್ನು ತೊರೆದ ನಂತರವೇ ಜ್ಞಾನ, ವಿಜ್ಞಾನ ತಂತ್ರಜ್ಞಾನಗಳಲ್ಲಿ ಸುಧಾರಣೆ ಕಾಣಲು ಸಾಧ್ಯ. ಪ್ರೌಢ ಶಿಕ್ಷಣ, ಸಂಶೋಧನೆ, ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅವರು ಶಿಕ್ಷಕರ ಏಳಿಗಾಗಿ ಶ್ರಮಿಸಿದರು.
 
ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಶಿಕ್ಷಣ ಸಚಿವರಾದ ಬಳಿಕ ಮೂರು ಲಕ್ಷಗಳಿಗೆ ಮೀಸಲಾಗಿದ್ದ ವಿದ್ಯಾರ್ಥಿ ವೇತನವನ್ನು ಎರಡು ಕೋಟಿ ರೂಪಾಯಿಗೆ ಏರಿಕೆ ಮಾಡಿದರು ಎಂದು ತಿಳಿಸಿದರು.

ಇವರ ಅವಧಿಯಲ್ಲಿ ಅಕಾಡೆಮಿಗಳು ಸ್ಥಾಪನೆಯಾದವು. ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ನೀಡಲು ಶ್ರಮಿಸಿದ್ದರು. ಇದರ ಸ್ಮರಣಾರ್ಥ ಅವರ ಜನ್ಮ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಉಪನ್ಯಾಸಕ ಎನ್.ಹನುಮಯ್ಯ ಮಾತನಾಡಿ, ಅಬ್ದುಲ್ ಕಲಂ ಆಜಾದ್ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು ಎಂದು ತಿಳಿಸಿದರು. ಶಿಕ್ಷಕಿ ಕೌಸರಿ, ಶಮಾಭಾನು, ನೂರ್ ಅಹಮದಿ ಬೇಗಂ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.