ADVERTISEMENT

ಅರ್ಧ ಗಂಟೆಯಲ್ಲಿಯೇ ನಾಶವಾದ ಭವಿಷ್ಯದ ಬೆಳೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 7:25 IST
Last Updated 7 ಮಾರ್ಚ್ 2011, 7:25 IST
ಅರ್ಧ ಗಂಟೆಯಲ್ಲಿಯೇ ನಾಶವಾದ ಭವಿಷ್ಯದ ಬೆಳೆ
ಅರ್ಧ ಗಂಟೆಯಲ್ಲಿಯೇ ನಾಶವಾದ ಭವಿಷ್ಯದ ಬೆಳೆ   

ಯಳಂದೂರು: ತಾಲ್ಲೂಕಿನ ವೈ.ಕೆ.ಮೋಳೆ ಗ್ರಾಮದ ಕೆಲವು ರೈತರಿಗೆ ಭಾನುವಾರ ಕರಾಳ ದಿನ. ಒಂದು ವರ್ಷದಿಂದ ತಾವೇ ಸಾಕಿ ಸಲಹಿದ್ದ ಕಬ್ಬು ಭಸ್ಮವಾದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ.20 ಕ್ಕೂ ಅಧಿಕ ಸಣ್ಣ ರೈತರು ಕಬ್ಬನ್ನು ಹಾಕಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಇವರ ಬೆಳೆದಿದ್ದ ಕಬ್ಬೆಲ್ಲವೂ ಸುಟ್ಟು ಕರಕಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದಲ್ಲಿರುವ ತೆಂಗಿನ ಗರಿಗಳೂ ಸುಟ್ಟು ಹೋಗಿವೆ. ಹಸಿರಿನಿಂದ ಕಂಗೂಳಿಸುತ್ತಿದ್ದ ಭೂಮಿಗೆ ಕಪ್ಪು ಸುತ್ತಿಕೊಂಡಿದೆ. ಕೆಲವರು ಕಟಾವು ಮಾಡಿದ್ದ ಕಬ್ಬನ್ನು ಜಮೀನಿನಲ್ಲೆ ಹಾಕಿದ್ದೂ ಅದೂ ಕೂಡ ಸುಟ್ಟುಹೋಗಿದೆ. ನೆಡಲು ಇಟ್ಟಿದ್ದ ಕಬ್ಬಿನ ತೊಂಡೆಗಳ ಗುಡ್ಡೆಗಳೂ ಕರಕಲಾಗಿವೆ.

ಗ್ರಾಮದ ಸಂಜೀವಮ್ಮದುಂಡುಮಾದಶೆಟ್ಟಿ, ಚಿಕ್ಕರಂಗಶೆಟ್ಟಿ, ಕೆಂಪಕಾಮಶೆಟ್ಟಿ, ಲಕ್ಷಮ್ಮ, ಪುಟ್ಟಸ್ವಾಮಿ, ಬಂಗಾರು, ಕೆಂಚಶೆಟ್ಟಿ, ವೈ.ಆರ್.ಕೃಷ್ಣಮೂರ್ತಿ, ಮಹದೇವಶೆಟ್ಟಿ, ಚಿಕ್ಕಕಾಮಶೆಟ್ಟಿ, ಚಿಕ್ಕಸುಬ್ಬಶೆಟ್ಟಿ, ರಂಗಶೆಟ್ಟಿ, ಚಿಕ್ಕಪುಟ್ಟಯ್ಯ, ಮಹಾದೇವಶೆಟ್ಟಿ ಸೇರಿದಂತೆ ಹಲವರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಕಬ್ಬು ನಾಶವಾಗಿದೆ.

ಬೆದರಿ ಓಡಿದ ಎತ್ತುಗಳು: ಸಂಜೀವಮ್ಮ ದುಂಡುಮಾದಶೆಟ್ಟಿ ಅವರ ಜಮೀನಿನಲ್ಲಿ ಟೈರ್ ಗಾಡಿಗೆ ಎತ್ತು ಕಟ್ಟಿ ಹಾಕಲಾಗಿತ್ತು. ಆದರೆ, ಆಕಸ್ಮಿಕ ಬೆಂಕಿಯಿಂದ ತಮಗೆ ಕಟ್ಟಿದ್ದ ಹಗ್ಗದ ಗಂಟು ಬಿಚ್ಚಿಕೊಳ್ಳದೇ ಹಗ್ಗ ಸುಡುವ ತನಕ ಕಾಯಬೇಕಾದ ಅನಿವಾರ್ಯತೆಯಲ್ಲಿ ತಮ್ಮ ದೇಹವನ್ನೂ ಸುಟ್ಟುಕೊಂಡು ನಂತರ ಬೆದರಿ ದಿಕ್ಕಾಪಾಲಗಿ ಓಡಿದ ಘಟನೆ ನಡೆದಿದೆ. ಒಂದು ಎತ್ತಿನ ತೊಡೆಯ ಭಾಗ ಸಂಪೂರ್ಣ ಸುಟ್ಟು ಹೋದರೆ ಮತ್ತೊಂದು ಎತ್ತಿಗೆ ಮುಖದ ಭಾಗ ಸುಟ್ಟು ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.