ADVERTISEMENT

ಆಸ್ಪತ್ರೆಯಲ್ಲೇ ಅಗತ್ಯ ಔಷಧಿ ನೀಡಲು ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 10:31 IST
Last Updated 26 ಸೆಪ್ಟೆಂಬರ್ 2013, 10:31 IST

ಕೊಳ್ಳೇಗಾಲ: ರೋಗಿಗಳಿಗೆ ಆಸ್ಪತ್ರೆಯಲ್ಲೇ ಅಗತ್ಯ ಔಷಧಿಗಳನ್ನು ವಿತರಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ವೈದ್ಯರಿಗೆ ಸೂಚಿಸಿದ್ದಾರೆ. ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಸೋಮವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಔಷಧಿಗಳನ್ನು ನೀಡದೆ, ಖಾಸಗಿ  ಅಂಗಡಿಗಳಿಗೆ ಚೀಟಿ ಬರೆದು ಕೊಡುತ್ತಿದ್ದಾರೆ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆಸ್ಪತ್ರೆಗೆ ಅಗತ್ಯ ಔಷಧಿಗಳನ್ನು ಒದಗಿಸ ಲಾಗುತ್ತದೆ. ವೈದ್ಯರು ರೋಗಿಗಳಿಗೆ ಆಸ್ಪತ್ರೆಯಲ್ಲೇ ಔಷಧಿಗಳನ್ನು ನೀಡಬೇಕು. ಹೊರಗಡೆಗೆ ಚೀಟಿ ಬರೆಯಬಾರದು ಎಂದು ಎಚ್ಚರಿಸಿದರು.

ವೈದ್ಯರು ರಾತ್ರಿ ವೇಳೆ ಕೇಂದ್ರಸ್ಥಾನ ದಲ್ಲಿಯೇ ಇದ್ದು ಕರ್ತವ್ಯ ನಿರ್ವಹಿಸ ಬೇಕು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ವಚ್ಚ ಕುಡಿಯುವ ನೀರು ಮತ್ತು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಶಾಸಕ ಆರ್‌. ನರೇಂದ್ರ ಮಾತನಾಡಿ ಹನೂರು ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯ ಹುದ್ದೆಯನ್ನು ಭರ್ತಿ ಮಾಡಬೇಕು. ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಕ್ರಮಕೈಗೊಳ್ಳಬೇಕು ಹಾಗೂ ಉಪ ವಿಭಾಗ ಆಸ್ಪತ್ರೆಗೆ ಮಹಿಳಾ ವೈದ್ಯರನ್ನು ತಕ್ಷಣ ನೇಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಆಸ್ಪತ್ರೆಯ ಸ್ಕ್ಯಾನಿಂಗ್‌ ಯಂತ್ರ ಬಳಕೆಗೆ ಅಗತ್ಯ ತಂತ್ರಜ್ಞನನ್ನು ದೊರಕಿಸುವ ಭರವಸೆ ನೀಡಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಘು, ಡಾ.ರಾಜು, ಡಾ.ಅಜಯ್‌, ಡಾ.ನಾಗೇಶ್‌, ಮುಖಂಡ ನಟರಾಜ್‌ ಮಾಳಿಗೆ, ಪುಟ್ಟಬುದ್ದಿ, ನಗರಸಭೆ ಸದಸ್ಯ ಜೆ. ಹರ್ಷ, ರಮೇಶ್‌, ಉಪಾಧ್ಯಕ್ಷ ಸಯ್ಯದ್‌ ಕಲೀಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.