ಗುಂಡ್ಲುಪೇಟೆ: ಕೆಲವು ದಿನಗಳಿಂದ ಪ್ರತಿದಿನವೂ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಬಳಿಯೇ ಸುತ್ತಾಡುತ್ತಿರುವ ಸಲಗವನ್ನು ಕಾಡಿಗಟ್ಟಬೇಕು ಎಂದು ವನ್ಯಜೀವಿಪ್ರಿಯರ ಒತ್ತಾಯಿಸಿದ್ದಾರೆ.
ಪ್ರತಿ ಸಂಜೆ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಬಂದು ಅನ್ನದಾಸೋಹದ ಅಳಿದುಳಿದ ಅನ್ನ, ಬಾಳೆಎಲೆ ಹಾಗೂ ತರಕಾರಿಗಳನ್ನು ತಿನ್ನುತ್ತಿದ್ದ ಆನೆ, ಕೆಲವು ದಿನಗಳಲ್ಲಿ ಹಗಲಿನ ವೇಳೆಯೂ ದೇವಸ್ಥಾನದ ಸುತ್ತಮುತ್ತ ಸುಳಿದಾಡುತ್ತಿರುವುದು ಸುದ್ದಿಯಾಗಿತ್ತು. ದೇವಸ್ಥಾನದ ಎದುರು ನಿಲ್ಲುವ ಆನೆ, ಪ್ರಸಾದ ನೀಡುವವರೆಗೂ ಕದಲದಿರುವುದು ಭಕ್ತರ ಅಚ್ಚರಿಗೆ ಕಾರಣವಾಗಿದೆ.
ಆನೆಯ ಭೇಟಿ ವ್ಯಾಪಕ ಪ್ರಚಾರ ಪಡೆದುಕೊಂಡ ಬಳಿಕ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಅಲ್ಲದೆ, ಪ್ರವಾಸಿಗರು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಯಾರಿಗೂ ತೊಂದರೆ ನೀಡದೆ ಇದ್ದರೂ ಒಂಟಿ ಆನೆಯಿಂದ ಅಪಾಯ ಎದುರಾಗಬಹುದು ಎನ್ನುವುದು ವನ್ಯಜೀವಿ ಪ್ರಿಯರ ಆತಂಕ.
‘ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಮುಂಜಾಗ್ರತಆ ಕ್ರಮವಾಗಿ ಜನರನ್ನು ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿ ನೇಮಿಸಲಾಗಿದ್ದು, ಅವರಿಗೆ ಪಟಾಕಿ ಹಾಗೂ ಬಂದೂಕು ನೀಡಲಾಗಿದೆ. ಆನೆ ಜನರ ಮೇಲೆ ದಾಳಿ ನಡೆಸಲು ಮುಂದಾದರೆ ಅದನ್ನು ಕಾಡಿಗಟ್ಟಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.