ಕೊಳ್ಳೇಗಾಲ: ಯಜಮಾನರು ಮತ್ತು ಮುಖಂಡರ ಮಧ್ಯಸ್ಥಿಕೆಯಲ್ಲಿ ಪ್ರೇಮಿಗಳು ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ವಿವಾಹವಾಗುವ ಮೂಲಕ ಬುಧವಾರ ದಾಂಪತ್ಯಕ್ಕೆ ಅಡಿಯಿಟ್ಟರು.
ಪಟ್ಟಣ ವ್ಯಾಪ್ತಿಯ ಮುತ್ತಾಪುರ ಹುಂಡಿ ಎಸ್. ಮಹೇಶ್ ಮತ್ತು ಅದೇ ಗ್ರಾಮದ ರುಕ್ಮಿಣಿ ಎರಡು ವರ್ಷಗಳಿಂದ ಪರಸ್ಪರ ಪ್ರೇಮಿಸಿ ವಿವಾಹವಾದರು.
ಮದುವೆಗೆ ಹುಡುಗಿ ಮನೆಯವರು ಒಪ್ಪಿಗೆ ನೀಡದ ಕಾರಣ ರುಕ್ಷ್ಮಿಣಿ ಕುಲಸ್ಥರು ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿಯೇ ಮಂಗಳವಾರ ತಾಳಿಕಟ್ಟಿಸುವ ಮೂಲಕ ವಿವಾಹ ನೆರವೇರಿತ್ತು. ವಿವಾಹದ ನಂತರ ಮಹೇಶ್ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣ ಈ ಬಗ್ಗೆ ರುಕ್ಷ್ಮಿಣಿ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.
ಸಬ್ ಇನ್ಸ್ಪೆಕ್ಟರ್ ಸಂದೀಪ್ಕುಮಾರ್, ಹುಡುಗ-ಹುಡುಗಿ ಕಡೆಯ ಯಜಮಾನರು ಠಾಣೆಯಲ್ಲಿ ಸಭೆ ನಡೆಸಿ, ಪರಸ್ಪರ ಒಪ್ಪಿಗೆ ಸೂಚಿಸಿದರು. ಯಜಮಾನರುಗಳ ಸಮ್ಮುಖದಲ್ಲೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಏರ್ಪಟ್ಟಿತು. ಹೊರಗೆ ಪ್ರೇಮಿಗಳು ಪರಸ್ಪರ ಹಾರ ಬದಲಾಯಿಸಿ, ಹೊಸ ಬಾಳಿಗೆ ಮುನ್ನುಡಿ ಬರೆದರು.
ಲಿಂಗರಾಜು, ಸಿದ್ದರಾಜು, ಮಹೇಶ್ಮನೋಹರ್, ರವಿ, ಸಿದ್ದರಾಜು, ಬಸಂತ್ ಮೋಟಾಯ್, ಜಗದೀಶ್, ರಾಜು, ಕೆಂಚ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.