ADVERTISEMENT

ಕುವೆಂಪು ಕಾವ್ಯ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 10:35 IST
Last Updated 1 ಫೆಬ್ರುವರಿ 2011, 10:35 IST

ಚಾಮರಾಜನಗರ: ‘ಮಾತೃಭಾಷೆ ಕನ್ನಡಕ್ಕೆ ಶ್ರೇಷ್ಠ ಸ್ಥಾನಮಾನ ತಂದುಕೊಟ್ಟಿರುವ ರಾಷ್ಟ್ರಕವಿ ಕುವೆಂಪು ಅವರ ಕಾವ್ಯಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು’ ಎಂದು ಚೂಡಾ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಸಲಹೆ ನೀಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಸಭಾಂಗಣದಲ್ಲಿ ಈಚೆಗೆ ಶ್ರೀಗಂಧ ಕನ್ನಡ ಯುವ ವೇದಿಕೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯು ತಮಿಳುನಾಡು ಮತ್ತು ಕೇರಳ ರಾಜ್ಯಕ್ಕೆ ಹೊಂದಿಕೊಂಡಿದೆ. ಆದರೆ, ಇಲ್ಲಿ ಕನ್ನಡವೇ ಸತ್ಯ; ಕನ್ನಡವೇ ನಿತ್ಯ. ಜಿಲ್ಲೆಯಲ್ಲಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ. ಕುವೆಂಪು ಅವರ ಆಶಯದಂತೆ ನಾಡು ಕಟ್ಟಬೇಕು. ಇದಕ್ಕೆ ಎಲ್ಲರಲ್ಲೂ ಕನ್ನಡಪರ ಕಳಕಳಿ ಇರಬೇಕು ಎಂದು ಆಶಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ನಾಗಮಲ್ಲಪ್ಪ ಮಾತನಾಡಿ, ‘ಕುವೆಂಪು ಅವರ ಎಲ್ಲಾ ಕೃತಿಗಳು ಜನಮಾನಸದಲ್ಲಿ ಹಾಸುಹೊಕ್ಕಾಗಿವೆ. ಅವುಗಳಲ್ಲಿ ಪರಿಪೂರ್ಣ ಸಾಹಿತ್ಯದ ಸಾರ ಅಡಗಿದೆ. ಕುವೆಂಪು ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅವರ ಸಾಹಿತ್ಯದಿಂದ ಪ್ರೇರಣೆ ಪಡೆದು ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸುವಂತಹ ಸಾಹಿತ್ಯ ರಚಿಸಲು ಯುವಪೀಳಿಗೆ ಮುಂದಾಗಬೇಕಿದೆ’ ಎಂದರು.

ಉಪನ್ಯಾಸಕ ನಾಗೇಶ್‌ಸೋಸ್ಲೆ ಮಾತನಾಡಿದರು. ಶ್ರೀಗಂಧ ಕನ್ನಡ ಯುವ ವೇದಿಕೆಯ ಅಧ್ಯಕ್ಷ ರವಿಚಂದ್ರಪ್ರಸಾದ್, ಜಿ.ಪಂ. ಸದಸ್ಯೆ ನಾಗಶ್ರೀ ಪ್ರತಾಪ್, ನಗರಸಭೆಯ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಮಹಮದ್ ಅಸ್ಗರ್, ಚಾ.ರಂ. ಶ್ರೀನಿವಾಸಗೌಡ, ಶಾ. ಮುರಳಿ, ಸುರೇಶ್ ಋಗ್ವೇದಿ, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.