ಯಳಂದೂರು: ತಾಲ್ಲೂಕಿನ ಕೆರೆಗಳ ನೀರನ್ನು ಶೇಖರಣೆ ಮಾಡಿ, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ವರ್ಷ ಪೂರ್ತಿ ಬೆಳೆ ಬೆಳೆಯಬಹುದು ಎಂದು ಶಾಸಕ ಎಸ್. ಜಯಣ್ಣ ಸಲಹೆ ನೀಡಿದರು. ಅವರು ಶನಿವಾರ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಈಗಾಗಲೇ 3 ಲಕ್ಷ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. ಪರಿಶಿಷ್ಟರಿಗೆ ಶೇ 90, ಸಾಮಾನ್ಯ ವರ್ಗಕ್ಕೆ ಶೇ 80 ಸಹಾಯಧನದಲ್ಲಿ ಪರಿಕರಗಳನ್ನು ವಿತರಿಸಲಾಗಿದೆ. ರೈತರು ಕಡಿಮೆ ನೀರನ್ನು ಬಳಸಿ, ಗರಿಷ್ಟ ಬೆಳೆ ಬೆಳೆಯುವ ಹನಿ, ತುಂತುರು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಭಾರತದಲ್ಲಿ ಶೇ 40 ರಷ್ಟು ಮಾತ್ರ ರೇಷ್ಮೆ ಬೆಳೆಯಲಾಗುತ್ತಿದೆ. ಉಳಿದದ್ದನ್ನು ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಬೇಳೆಕಾಳು, ಎಣ್ಣೆ ಕಾಳುಗಳ ಬೆಳೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು. ಗುಂಬಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ₹1 ಲಕ್ಷದ ಚೆಕ್ ವಿತರಿಸಿದರು.
ತಾ.ಪಂ ಅಧ್ಯಕ್ಷ ನಂಜುಂಡಯ್ಯ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸವಲತ್ತು ಪಡೆಯುತ್ತಿರುವ ಫಲಾನು ಭವಿಗಳೇ ಮತ್ತೆ ಮತ್ತೆ ಸೌಲಭ್ಯ ಪಡೆಯು ತ್ತಿದ್ದಾರೆ. ಎಲ್ಲಾ ರೈತರಿಗೂ ಸರ್ಕಾರಿ ಸೌಲಭ್ಯಗಳು ಲಭ್ಯವಾಗಬೇಕು ಎಂದರು.
ರೈತರ ಗದ್ದಲ: ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿತ್ತು. ತಾಲ್ಲೂಕಿನ ವಿವಿಧೆಡೆ ಗ್ರಾಮಗಳಿಂದ ರೈತರು ಬಂದಿದ್ದರು. ಆದರೆ ಸಭೆ ಮಧ್ಯಾಹ್ನ 12ಕ್ಕೆ ಆರಂಭ ವಾಯಿತು. ಇದರಿಂದ ಸಿಟ್ಟಿಗೆದ್ದ ರೈತರು ಕೃಷಿ ಇಲಾಖೆಯ ಅಧಿಕಾರಿಗಳೊಡನೆ ವಾಗ್ವಾದಕ್ಕಿಳಿದರು.
ಜಿ.ಪಂ ಉಪಾಧ್ಯಕ್ಷ ಜೆ. ಯೋಗೇಶ್, ತಾ.ಪಂ ಉಪಾಧ್ಯಕ್ಷೆ ಪದ್ಮಾವತಿ ಮಹಾದೇವನಾಯಕ, ಸದಸ್ಯರಾದ ಸಿದ್ಧರಾಜು, ನಾಗರಾಜು, ಭಾಗ್ಯನಂಜಯ್ಯ, ಪಲ್ಲವಿಮಹೇಶ್, ಶಾರದಾಂಬ ಬಸವಣ್ಣ, ಪ.ಪಂ ಸದಸ್ಯ ಜೆ. ಶ್ರೀನಿವಾಸ್ ಪಿಎಸಿಸಿ ಅಧ್ಯಕ್ಷ ಚಿಕ್ಕಮಾದಯ್ಯ, ಶಂಭುಲಿಂಗಪ್ಪ, ಶಂಕರೇಗೌಡ, ದೊಡ್ಡೇಗೌಡ, ರಮೇಶ್, ಡಾ. ನಾಗರಾಜು, ಕೇಶವ, ವೆಂಕಟರಂಗಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.