ADVERTISEMENT

ಕೇಂದ್ರದ ಸೌಲಭ್ಯ: ಜನಜಾಗೃತಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 10:00 IST
Last Updated 12 ಏಪ್ರಿಲ್ 2012, 10:00 IST

ಚಾಮರಾಜನಗರ: `ಕೇಂದ್ರ ಸರ್ಕಾರ ಜನಪರ ಯೋಜನೆ ರೂಪಿಸಿದ್ದು, ಅವುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕರ್ತರು ಮುಂದಾಗಬೇಕು~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಮಂಗಳವಾರ ನಡೆದ ಚಾಮ ರಾಜನಗರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್  ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ವಿಧಾನಸಭೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ತೋಟಗಾರಿಕೆ ಮಿಷನ್ ಇತ್ಯಾದಿ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ತಾಲ್ಲೂಕಿನಲ್ಲಿ ಶಾಸಕರ ಪ್ರದೇಶಾ ಭಿವೃದ್ಧಿ ನಿಧಿಯಡಿ ಸಮುದಾಯ ಭವನಗಳು, ರಸ್ತೆ, ಚರಂಡಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಪ್ರಸ್ತುತ ಪೂರ್ಣಪ್ರಮಾಣದಲ್ಲಿ ಬ್ಲಾಕ್ ಸಮಿತಿ ರಚನೆಯಾಗಿದೆ. ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಬ್ಲಾಕ್ ಅಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬರಗಾಲ ತಲೆದೋರಿದೆ. ಬ್ಲಾಕ್ ಸಮಿತಿಯ ಪದಾಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಬೇಕು ಎಂದು ಹೇಳಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಬಿ.ಪಿ. ಪುಟ್ಟ ಬುದ್ಧಿ ಮಾತನಾಡಿದರು. ತಾ.ಪಂ. ಸದಸ್ಯ ಬಸವಣ್ಣ, ಎಪಿಎಂಸಿ ಉಪಾ ಧ್ಯಕ್ಷ ಪುರುಷೋತ್ತಮ್, ಸಮಿತಿ ಉಪಾಧ್ಯಕ್ಷ ಚೆನ್ನಬಸಪ್ಪ, ನಾಗಯ್ಯ, ಕೃಷ್ಣ, ಕಾಗಲವಾಡಿ ಚಂದ್ರು,  ದೊರೆ,  ಮಹದೇವಸ್ವಾಮಿ, ನಾಗರಾಜು ಇತರರು ಹಾಜರಿದ್ದರು.

ಅರ್ಜಿ ಆಹ್ವಾನ
ತೋಟಗಾರಿಕೆ ಇಲಾಖೆಯಿಂದ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜನಗರ ತೋಟ ಗಾರಿಕೆ ತರಬೇತಿ ಕೇಂದ್ರದಲ್ಲಿ 2012ರ ಮೇ 2ರಿಂದ 2013ರ ಫೆ. 29ರವರೆಗೆ ತೋಟಗಾರಿಕಾ ತರಬೇತಿ ನೀಡಲಾ ಗುತ್ತದೆ. ಸಾಮಾನ್ಯ ಯೋಜನೆಯಡಿ ನಾಲ್ವರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಒಬ್ಬ ಅಭ್ಯರ್ಥಿಗೆ ನೀಡಲಾಗುವುದು.

 ಜಿಲ್ಲೆಯ ಆಸಕ್ತ ರೈತರ ಮಕ್ಕಳು ಅರ್ಜಿ ಸಲ್ಲಿಸಬಹುದು. ಏ. 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ತರಬೇತಿ ಆಯ್ಕೆಗೆ ಏ. 27 ರಂದು ಬೆಳಿಗ್ಗೆ 11ಗಂಟೆಗೆ ಉಪ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.