ADVERTISEMENT

ಕೊಳ್ಳೇಗಾಲದಲ್ಲಿ ಅಂಕುರಿಸಿದ ಬಿಎಸ್‌ಪಿ

ಸರಣಿ ಸೋಲಿನಿಂದ ಹೊರಬಾರದ ಎ.ಆರ್.ಕೃಷ್ಣಮೂರ್ತಿ, 3ನೇ ಸ್ಥಾನದಲ್ಲಿ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 16 ಮೇ 2018, 10:45 IST
Last Updated 16 ಮೇ 2018, 10:45 IST
ಕೊಳ್ಳೇಗಾಲದಲ್ಲಿ ಅಂಕುರಿಸಿದ ಬಿಎಸ್‌ಪಿ
ಕೊಳ್ಳೇಗಾಲದಲ್ಲಿ ಅಂಕುರಿಸಿದ ಬಿಎಸ್‌ಪಿ   

ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್, ಬಿಜೆಪಿಯನ್ನು ತಿರಸ್ಕರಿಸಿ ಈ ಬಾರಿ ಬಿಎಸ್‌ಪಿಯ ಕೈ ಹಿಡಿದಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಬಿಎಸ್‌ಪಿಯ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹೇಶ್ ಅಂತೂ, ಇಂತೂ ವಿಜಯದ ನಗೆ ಬೀರಿದ್ದಾರೆ. ಅದೂ ಭರ್ಜರಿ ಗೆಲುವಿನ ಮೂಲಕ.

ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲಿ ಸೋಲನ್ನೇ ಕಾಣುತ್ತಿದ್ದರೂ ಈ ಬಾರಿ ಅವರು ಜಯ ಗಳಿಸಿರುವುದಕ್ಕೆ ಅಚ್ಚರಿಪಡಬೇಕಿಲ್ಲ. ಆದರೆ, ಅವರು ಜಯ ಸಾಧಿಸಿರುವ ಭಾರಿ ಪ್ರಮಾಣದ ಅಂತರ ಎಲ್ಲರನ್ನೂ ಚಕಿತಗೊಳಿಸಿದೆ.

19,454 ಮತಗಳಷ್ಟು ಅಂತರವನ್ನು ಇವರು ಪಡೆದಿದ್ದಾರೆ. ಇದು ಕ್ಷೇತ್ರದಲ್ಲಿ 1994ರ ನಡುವೆ ಪಡೆದ ದಾಖಲೆಯ ಗೆಲುವು ಎನಿಸಿದೆ. ಅಷ್ಟು ಮಾತ್ರವಲ್ಲ ಜಿಲ್ಲೆಯಲ್ಲಿ ಈ ಬಾರಿಯ ದೊಡ್ಡ ಗೆಲುವಿನ ಅಂತರ ಎನಿಸಿದೆ. ಈ ಬಾರಿ ಅವರು ಕೇವಲ ದಲಿತರ ಮತಗಳನ್ನಷ್ಟೇ ನೆಚ್ಚಿಕೊಂಡು ಕೂರದೇ ಇತರ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದು ಗೆಲುವಿಗೆ ಸಹಕಾರಿಯಾಯಿತು.

ADVERTISEMENT

ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಘೋಷಿಸಿದಾಗ ಉಂಟಾದ ಅಸಮಾಧಾನಗಳೂ ಬಿಎಸ್‌ಪಿಗೆ ರಾಜಮಾರ್ಗವನ್ನೇ ಹಾಕಿಕೊಟ್ಟಿತು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಕೆಲವೇ ದಿನಗಳಲ್ಲಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ಟಿಕೆಟ್ ಘೋಷಿಸಲಾಯಿತು. ಹಾಲಿ ಶಾಸಕರಾಗಿದ್ದ ಎಸ್.ಜಯಣ್ಣ ಅವರನ್ನು ಹಾಗೂ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿದ್ದು ಎಲ್ಲ ಮುಖಂಡರನ್ನೂ ಒಟ್ಟಾಗಿ ಸೇರಿಸುವುದಕ್ಕೆ ತಡೆಯಾಯಿತು. ಅತ್ತ ಬಿಜೆಪಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಹೀಗಾಗಿ, ಮತದಾರರು ಈ ಬಾರಿ ಬಿಎಸ್‌ಪಿಗೆ ಅವಕಾಶ ನೀಡಿದ್ದಾರೆ.

ಇದೆಲ್ಲದ್ದಕ್ಕೂ ಹೆಚ್ಚಾಗಿ ಮಹೇಶ್ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಸತತವಾಗಿ ಸಂಚರಿಸಿ ಜನರೊಟ್ಟಿಗೆ ಬೆರೆತರು. ಇದು ಸಹ ಅವರ ಗೆಲುವಲ್ಲಿ ಮಹತ್ವ ಪಾತ್ರ ವಹಿಸಿತು. ಬಿಜೆಪಿಯ ಜಿ.ಎನ್.ನಂಜುಂಡಸ್ವಾಮಿ ಸಹ ಈ ಹಿಂದೆ 2 ಬಾರಿ ಶಾಸಕರಾಗಿದ್ದವರು. ಎ.ಆರ್.ಕೃಷ್ಣಮೂರ್ತಿ ಸಹ ಶಾಸಕರಾಗಿದ್ದವರು. ಇಬ್ಬರು ಮಾಜಿ ಶಾಸಕರನ್ನು ಸೋಲಿಸಿದ ಶ್ರೇಯಕ್ಕೂ ಮಹೇಶ್ ಪಾತ್ರರಾಗಿದ್ದಾರೆ.

ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಇವರು ಗೆಲುವಿನ ಅಂತರವನ್ನು ಬಿಟ್ಟುಕೊಡಲಿಲ್ಲ. ಎಲ್ಲ ಸುತ್ತುಗಳಲ್ಲಿಯೂ ಇವರಿಗೆ ಹೆಚ್ಚಿನ ಮತಗಳೇ ಲಭಿಸಿ ದವು.

ಕ್ಷೇತ್ರದಲ್ಲಿ ಈವ ರೆಗೆ ನಡೆದ 14 ಚುನಾವಣೆಗಳಲ್ಲಿ 9 ಬಾರಿ ಕಾಂಗ್ರೆಸ್ ಜಯ ಗಳಿಸಿದೆ. ಬಿಜೆಪಿ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ. 2ನೇ ಬಾರಿ ಗೆಲುವು ಸಾಧಿಸುವ ಬಿಜೆಪಿ ಕನಸೂ ಭಗ್ನಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಇದೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿ ಸಾಕಷ್ಟು ಪ್ರಚಾರ ನಡೆಸಿದ್ದರು. ಇವು ಯಾವುವೂ ಮತದಾರರ ಮೇಲೆ ಪರಿಣಾಮ ಬೀರಿಲ್ಲ.
3ನೇ ಸ್ಥಾನಕ್ಕೆ ಬಿಜೆಪಿ ಕುಸಿದಿದೆ.

ಸೋಲಿನ ಸುಳಿಯಿಂದ ಹೊರ ಬಾರದ ಎ.ಆರ್‌.ಕೆ!

ಸಂತೇಮರಹಳ್ಳಿ ಕ್ಷೇತ್ರದಲ್ಲಿ ಕೇವಲ 1 ಮತದ ಅಂತರದಿಂದ ಆರ್.ಧ್ರುವನಾರಾಯಣ ವಿರುದ್ಧ ಸೋಲು ಕಂಡ ಎ.ಆರ್.ಕೃಷ್ಣಮೂರ್ತಿ ಈ ಚುನಾವಣೆಯಲ್ಲೂ ಗೆಲುವಿನ ದಡ ಸೇರುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ಸಂಸದ ಧ್ರುವನಾರಾಯಣ ಅವರ ವಿಶ್ವಾಸ ಗಳಿಸಿ ಪ್ರಚಾರಕ್ಕೆ ಕರೆ ತಂದರು. ಈ ಹಿಂದೆ ಇಲ್ಲಿ ಶಾಸಕರಾಗಿದ್ದ ಧ್ರುವನಾರಾಯಣ ಸಾಕಷ್ಟು ಪ್ರಚಾರ ನಡೆಸಿದರೂ ಕೃಷ್ಣಮೂರ್ತಿ ಅವರ ಗೆಲುವು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.