ADVERTISEMENT

ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:25 IST
Last Updated 15 ಡಿಸೆಂಬರ್ 2012, 9:25 IST

ಯಳಂದೂರು: ತಹಶೀಲ್ದಾರ್ ಕಚೇರಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಜಯರಾಮ್ ಅವರು ಕಚೇರಿ ಕೆಲಸದಲ್ಲಿ ಆಗುತ್ತಿರುವ ವಿಳಂಬಗಳ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಆಲಿಸಿದರು.

ತಾಲ್ಲೂಕಿನ ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಬೇಕು. ಪಿಂಚಣಿಯಲ್ಲಿ ಕೆಲವು ನ್ಯೂನ್ಯತೆಗಳಿವೆ. ಆಹಾರ ಇಲಾಖೆಯಲ್ಲಿ ಇನ್ನೂ ಸಾವಿರಕ್ಕೂ ಹೆಚ್ಚು ಪಡಿತರ  ಕಾರ್ಡ್‌ಗಳು ವಿತರಣೆಯಾಗಿಲ್ಲ ಎಂಬ ದೂರುಗಳು ಬಂದವು. ಕಾಡ್‌ಗಳಿಗಾಗಿ ಬಿಳಿಗಿರಿರಂಗನಬೆಟ್ಟದಿಂದ ಯಳಂದೂರಿಗೆ ಬರಲು ಬುಡಕಟ್ಟು ಜನರಿಗೆ ತೊಂದರೆಯಾಗಿದ್ದು, ಬೆಟ್ಟದಲ್ಲೇ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಭೂ ಮಾಪನಾ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದಿದ್ದರೂ ಸರ್ವೆ ಕಾರ್ಯ ನಡೆದಿಲ್ಲ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ವಾರದೊಳಗೆ ಸರ್ವೆ ಕಾರ್ಯ ಮುಗಿಸುವಂತೆ ತಾಕೀತು ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಕೆಲವು ಹಾಸ್ಟೆಲ್‌ಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ದತಿ ಜಾರಿಯಲ್ಲಿದ್ದರೂ ಇದರ ಪಾಲನೆಯಾಗುತ್ತಿಲ್ಲ. ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಏರುಪೇರುವ ಮಾಡುವ ಉದ್ದೇಶದಿಂದಲೇ ಯಂತ್ರಗಳನ್ನು ಕೆಡಿಸಲಾಗಿದೆ ಎಂದು ಸಾರ್ವಜನಿಕರು ದೂರಿದರು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು. ಜೊತೆಗೆ ಸಬ್‌ರಿಜಿಸ್ಟರ್ ಕಚೇರಿಯ ಮುಂಭಾಗ ಸೋಮವಾರದೊಳಗೆ ನೊಟೀಸ್ ಬೋರ್ಡ್ ಅಳವಡಿಸಿ ಇಲಾಖೆಯ ಮಾಹಿತಿಗಳನ್ನು ಅದರಲ್ಲಿ ಹಾಕುವಂತೆ ತಾಕೀತು ಮಾಡಿದರು.

ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಂಡು ಸಾರ್ವಜನಿಕ ಕೆಲಸಗಳಲ್ಲಿ ವಿಳಂಬವಾಗದಂತೆ ಕ್ರಮ ವಹಿಸಿ ಎಂದು ತಹಶೀಲ್ದಾರ್ ಶಿವನಾಗಯ್ಯ ಅವರಿಗೆ ಜಿಲ್ಲಾಧಿಕಾರಿ  ಸಲಹೆ ನೀಡಿ ದರು. ಉಪ ತಹಶೀಲ್ದಾರ್ ನಂಜಯ್ಯ, ಶಿರಸ್ತೇದಾರ್ ನಂಜುಂಡಯ್ಯ, ರೈತ ಮುಖಂಡ ಹೊನ್ನೂರು ಪ್ರಕಾಶ್, ಮದ್ದೂರು ರಾಜಣ್ಣ, ಕೃಷ್ಣಾಪುರ ದೇವ ರಾಜು, ವಜ್ರಮುನಿ ಹಾಜರಿದ್ದರು.

ವಿದ್ಯಾರ್ಥಿಗಳ ಪ್ರತಿಭಟನೆ
ಕೊಳ್ಳೇಗಾಲ: ಕಾಲೇಜಿನಲ್ಲಿ ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಮುಡಿಗುಂಡ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಳು ದಿಕ್ಕಾರ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT