ADVERTISEMENT

ತಾಂತ್ರಿಕ ದೋಷ: 60 ಹಳ್ಳಿಯಲ್ಲಿ ಕಗ್ಗತ್ತಲು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 6:55 IST
Last Updated 14 ಅಕ್ಟೋಬರ್ 2011, 6:55 IST

ಸಂತೇಮರಹಳ್ಳಿ: ಇಲ್ಲಿನ ವಿದ್ಯುತ್ ಪ್ರಸರಣ ನಿಗಮದ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಹೋಬಳಿ ವ್ಯಾಪ್ತಿಯ 60 ಹಳ್ಳಿಯ ಜನರು ಬುಧವಾರ ರಾತ್ರಿ ಕತ್ತಲೆಯಲ್ಲಿ ಕಳೆಯುವಂತಾಯಿತು.

ವಿದ್ಯುತ್ ಪ್ರಸರಣ ನಿಗಮದ ಘಟಕಕ್ಕೆ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯ 220 ಕೆವಿ ಮುಖ್ಯ ಘಟಕದಿಂದ ವಿದ್ಯುತ್ ಸರಬರಾಜಾಗುತ್ತಿದೆ. ತಾಂತ್ರಿಕ ದೋಷದ ಪರಿಣಾಮ ಪೂರೈಕೆ ಸ್ಥಗಿತಗೊಂಡಿತು. ಸಕಾಲದಲ್ಲಿ ಸೆಸ್ಕ್‌ನ ಅಧಿಕಾರಿಗಳು ದುರಸ್ತಿಗೂ ಮುಂದಾಗಲಿಲ್ಲ.

ಇದರ ಪರಿಣಾಮ ಸಂತೇಮರಹಳ್ಳಿ ಘಟಕದಿಂದ ಪೂರೈಕೆಯಾಗುವ ಆಲ್ದೂರು, ನವಿಲೂರು, ಕೆಂಪನಪುರ, ಮಂಗಲ ನೀರು ಶುದ್ಧೀಕರಣ ಘಟಕ, ಚುಂಗಡಿಪುರ, ಹೊನ್ನೂರು, ಅಂಬಳೆ ಫೀಡರ್ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಇದರಿಂದ ನಾಗರಿಕರು ತೀವ್ರ ಸಂಕಷ್ಟ ಅನುಭವಿಸಿದರು.

ಹೋಬಳಿ ಕೇಂದ್ರದಲ್ಲಿರುವ ನೆಮ್ಮದಿ ಕೇಂದ್ರದ ಮುಂಭಾಗ ಗುರುವಾರ ಬೆಳಿಗ್ಗೆ ಜಾತಿ ಪ್ರಮಾಣಪತ್ರ ಪಡೆಯಲು ವಿವಿಧ ಗ್ರಾಮದ ವಿದ್ಯಾರ್ಥಿಗಳು ಜಮಾಯಿಸಿದ್ದರು. ವಿದ್ಯುತ್ ಇಲ್ಲದ ಪರಿಣಾಮ ಅನಿವಾರ್ಯವಾಗಿ ಕಾಯುವಂತಾಯಿತು.

ಶಿವನಸಮುದ್ರದ ಕೆಪಿಟಿಸಿಎಲ್ ವಿಭಾಗದ ಸಿಬ್ಬಂದಿ ತಾಂತ್ರಿಕ ದೋಷವನ್ನು ಸರಿಪಡಿಸಿದರು. ಹೀಗಾಗಿ, ಮಧ್ಯಾಹ್ನ 12ಗಂಟೆಗೆ ವಿದ್ಯುತ್ ಪೂರೈಕೆಗೆ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.