ಚಾಮರಾಜನಗರ: ಆನೆ ದಂತ ಸಾಗಿಸುತ್ತಿದ್ದ ವೇಳೆ ಅರಣ್ಯ ಸಂಚಾರ ದಳದ ಸಿಬ್ಬಂದಿ ದಾಳಿ ನಡೆಸಿ ಬುಧವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿಗೆ ಸೇರಿದ ತಾಳವಾಡಿ ಫಿರ್ಕಾದ ಗಾಜನೂರು ಗ್ರಾಮದ ವೆಂಕಟರಾಮು ಹಾಗೂ ಈರೋಡ್ನ ಮಹಮ್ಮದ್ ವಾಯ್ಸ ಬಂಧಿತರು.
ಈ ಇಬ್ಬರು ಆರೋಪಿಗಳು ತಾಳವಾಡಿ ಕಡೆಯಿಂದ ಚಾಮರಾಜನಗರಕ್ಕೆ ಬೈಕ್ನಲ್ಲಿ ಆನೆ ದಂತ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿದೆ. ಈ ಮಾಹಿತಿ ಮೇರೆಗೆ ಬೆಂಗಳೂರಿನ ಸಿಐಡಿ ಅರಣ್ಯ ಸಂಚಾರ ಘಟಕದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಲಕ್ಷ್ಮೀನರಸಿಂಹಯ್ಯ ನಗರಕ್ಕೆ ಆಗಮಿಸಿದ್ದಾರೆ.
ಇಲ್ಲಿನ ಅರಣ್ಯ ಸಂಚಾರ ಘಟಕದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಚಿಕ್ಕಸಿದ್ದಯ್ಯ ಹಾಗೂ ಸಿಬ್ಬಂದಿ ವೆಂಕಟಯ್ಯನಛತ್ರದ ಗೇಟ್ ಬಳಿ ಕಾದುಕುಳಿತಿದ್ದಾರೆ.
ಆರೋಪಿಗಳು ಬೈಕ್ನಲ್ಲಿ ಬಂದ ವೇಳೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿತರ ಬಳಿ ಇದ್ದ ಒಂದು ಆನೆ ದಂತ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.