ADVERTISEMENT

‘ದ್ವೀಪ’ ಗ್ರಾಮಕ್ಕೆ ಸೇತುವೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 9:53 IST
Last Updated 27 ಫೆಬ್ರುವರಿ 2018, 9:53 IST
ಕೊಳ್ಳೇಗಾಲ ತಾಲ್ಲೂಕಿನ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಯಡಕುರಿಯ ಸೇತುವೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿದರು
ಕೊಳ್ಳೇಗಾಲ ತಾಲ್ಲೂಕಿನ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಯಡಕುರಿಯ ಸೇತುವೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿದರು   

ಕೊಳ್ಳೇಗಾಲ: ಹಲವು ದಶಕಳಿಂದ ಅಭಿವೃದ್ಧಿ ಕಾಣದ ದ್ವೀಪ ಗ್ರಾಮಕ್ಕೆ ಇಂದು ಐತಿಹಾಸಿಕ ದಿನವಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ತಾಲ್ಲೂಕಿನ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಯಡಕುರಿಯ ಸೇತುವೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 217 ಸೇತುವೆಗಳನ್ನು ನಿರ್ಮಿಸಿದ್ದೇವೆ. ಅನೇಕ ಕಾಮಗಾರಿಗಳು ಸಹ ನಡೆಯುತ್ತಿವೆ. ರಾಜ್ಯದಲ್ಲಿ ಸುಮಾರು 25 ಸಾವಿರ ಕಿ.ಮೀ ರಸ್ತೆ ಮಾಡಿದ್ದೇವೆ. ಯಾವುದೇ ತರಹದ ಕಳಪೆ ರಸ್ತೆಯನ್ನು ಮಾಡಿಲ್ಲ ಎಂದರು. ಕೊಳ್ಳೇಗಾಲ ತಾಲ್ಲೂಕಿನಿಂದ ಮಲೆಮಹದೇಶ್ವರ ಬೆಟ್ಟ ಹಾಗೂ ಪಾಲಾರ್ ರಸ್ತೆಯವರೆಗೆ ಸುಮಾರು 90 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಶಾಸಕ ಎಸ್.ಜಯಣ್ಣ ಮಾತನಾಡಿ, ಯಡಕುರಿಯ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ತೆರಳಬೇಕೆಂದರೆ ಪ್ರತಿನಿತ್ಯ ದೋಣಿಯನ್ನೆ ಅವಲಂಬಿಸಬೇಕಿತ್ತು. ಸಚಿವರು, ಸಂಸದರು, ಶಾಸಕರು ದೋಣಿಯಲ್ಲಿ ತೆರಳುತ್ತಿರುವ ದೃಶ್ಯಗಳನ್ನು ನಾವು ಕಂಡಿದ್ದೇವೆ, ಆದರೆ ಈಗ ಸೇತುವೆಯ ಉದ್ಘಾಟನೆ ಭಾಗ್ಯವನ್ನು ಕಾಣಬಹುದಾಗಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶಾಸಕ ಆರ್.ನರೇಂದ್ರ ಮಾತನಾಡಿ, ಬಹಳ ದಿನಗಳಿಂದ ಜನರ ಬೇಡಿಕೆಯಾಗಿದ್ದ ಸೇತುವೆಯನ್ನು ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಿರುವುದು ಆತ್ಮ ತೃಪ್ತಿ ತಂದಿದೆ. ಈ ಹಿಂದೆ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯೊಳಗೆ ಸೇತುವೆ ನಿರ್ಮಾಣ ಮಾಡಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹನೂರು ಕ್ಷೇತ್ರಕ್ಕೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅನುದಾನ ನೀಡಿದ್ದಾರೆ. ಪ್ರಮುಖವಾಗಿ ಬಹುಗ್ರಾಮ ಕುಡಿಯುವ ನೀರು ಯೋಜನೆ, ಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ ಅಗತ್ಯ ಪ್ರಕ್ರಿಯೆಗಳು ಆರಂಭವಾಗಿವೆ. ರಸ್ತೆ ಕಾಮಗಾರಿಗಳು ಸಹ ನಡೆಯುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮ 4 ಗಂಟೆ ತಡವಾಗಿ ಆರಂಭವಾಗಿತು. ಕಾರ್ಯಕ್ರಮದಲ್ಲಿ ಹನೂರು ಶಾಸಕ ಆರ್.ನರೇಂದ್ರ , ಜಿಲ್ಲಾ ಪಂಚಾಯಿತಿ ಉಪಧ್ಯಾಕ್ಷ ಯೋಗೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಂತಿ, ತಾ.ಪಂ. ಅಧ್ಯಕ್ಷ ರಾಜು, ತಾ.ಪಂ.ಉಪಧ್ಯಾಕ್ಷ ಲತಾ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶೀ ಸಿದ್ಧಗಂಗಪ್ಪ, ಮುಖಂಡರಾದ ದಿವ್ಯಕುಮಾರ್, ಚೇತನ್ ಇತರರು ಇದ್ದರು.

ಹಲವು ದಶಕಗಳ ಕೂಗು

ಕೊಳ್ಳೇಗಾಲ ತಾಲ್ಲೂಕಿನ ಯಡಕುರಿಯ ಗ್ರಾಮಕ್ಕೆ ಸೇತುವೆ ನಿರ್ಮಿಸಬೇಕೆಂಬ ಹಲವು ದಶಕಗಳ ಕೂಗು ಕೊನೆಗೂ ಈಡೇರಿದೆ. 1991ರಲ್ಲಿ ಪ್ರವಾಹ ಬಂದಾಗ 2 ಜೀವಗಳು ನೀರುಪಾಲಾಗಿದ್ದವು. ಹೊರ ಜಗತ್ತಿನ ಜತೆ ನಂಟು ಹೊಂದಲು ಇಲ್ಲಿನ ಜನ ತೆಪ್ಪದಲ್ಲಿಯೇ ತೆರಳಬೇಕಾದ ಸ್ಥಿತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.