ADVERTISEMENT

ನಕಲಿ ಎಫ್‌ಐಆರ್‌ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 9:24 IST
Last Updated 23 ಮಾರ್ಚ್ 2018, 9:24 IST

ಚಾಮರಾಜನಗರ: ಹಝ್ರತ್ ಮೌಲಾನಾ ಸಜ್ಜಾದ್ ನೋಮಾನಿಯವರ ಮೇಲೆ ರಾಜಕೀಯ ಪ್ರೇರಿತವಾಗಿ ಹಾಕಲಾಗಿರುವ ನಕಲಿ ಎಎಫ್‍ಆರ್‌ ಅನ್ನು ಹಿಂಪಡೆಯಬೇಕು ಮತ್ತು ಎಫ್‍ಐಆರ್ ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದಲ್ಲಿ ಬುಧವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿದರು.

ಮುಖಂಡರಾದ ಮೌಲಾನ ಇಸ್ಮಾಯಿಲ್ ಮಾತನಾಡಿ, ದೇಶದಲ್ಲಿ ಹಲವಾರು ಧಾರ್ಮಿಕ ಗುರುಗಳು ಹಾಗೂ ಮುಸ್ಲಿಂ ಮುಖಂಡರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ. ಅದರಲ್ಲಿ ಮೌಲಾನ ಅಂಜರ್ ಷಾ ಖಾಸಿಮಿ ಅವರು ಕೂಡ ಒಬ್ಬರು. ಅವರು ನಿರಪರಾಧಿ ಎಂದು ಕಾನೂನು ಹೋರಾಟದಲ್ಲಿ ಸಾಬೀತಾಗಿದೆ. ಸಜ್ಜಾದ್‍ ಸೌಮಾನಿ ಅವರ ಮೇಲೆ ಕೂಡ ಸುಳ್ಳು ಮೊಕದ್ದಮೆ ದಾಖಲಿಸಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಪಿಎಫ್‍ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಬೇಬ್‍ಖಾನ್ ಮಾತನಾಡಿ, ಹಝ್ರತ್ ಮೌಲಾನ ಸಜ್ಜಾದ್ ನೋಮಾನಿ ಅವರು ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶ್ರಮಿಸಿದ್ದಾರೆ. ದೇಶದಲ್ಲಿ ಸಹೋದರತೆಯನ್ನು ನೆಲೆಗೊಳಿಸಲು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರು ದೇಶದ್ರೋಹವಾಗುವಂತಹ ರೀತಿಯ ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ. ಅವರ ಮೇಲೆ ರಾಜಕೀಯ ದ್ವೇಷದಿಂದ ಆರೋಪ ಮಾಡಲಾಗಿದೆ ಎಂದು ದೂರಿದರು.

ADVERTISEMENT

ಹಝ್ರತ್ ಮೌಲಾನ ಸಜ್ಜಾದ್ ನೋಮಾನಿಯವರ ಮೇಲೆ ದಾಖಲಿಸಿರುವ ಎಫ್‍ಐಆರ್ ಹಿಂಪಡೆಯಬೇಕು ಮತ್ತು ಕುತಂತ್ರದ ಮೂಲಕ ಎಫ್‍ಐಆರ್ ದಾಖಲಿಸಿರುವ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಿಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಅಜೀಂಷರೀಫ್, ಎಸ್‍ಡಿಪಿಐ ಉಪಾಧ್ಯಕ್ಷ ಸಮೀಉಲ್ಲಾ, ಪ್ರಧಾನ ಕಾರ್ಯದರ್ಶಿ ಜಬೀಉಲ್ಲಾ, ನಗರಸಭಾ ಸದಸ್ಯ ಸಿ.ಎಸ್. ಸೈಯದ್‍ಆರೀಫ್, ಆಲ್ ಇಂಡಿಯಾ ಇಮಾಮ್ ಕೌಸ್ಸಿಲ್‍ನ ಮೌಲಾನ ಮುಕ್ತಾರ್‌ ಸಾಹೇಬ್, ಮೌಲಾನ ಹಸೀಬ್ ಸಾಹೇಬ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.