ADVERTISEMENT

ನನ್ನ ಸಾಹಿತ್ಯಕ್ಕೆ ಜನ್ಮ ನೀಡಿದ್ದೇ ಈ ಊರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2011, 11:05 IST
Last Updated 19 ನವೆಂಬರ್ 2011, 11:05 IST
ನನ್ನ ಸಾಹಿತ್ಯಕ್ಕೆ ಜನ್ಮ ನೀಡಿದ್ದೇ ಈ ಊರು
ನನ್ನ ಸಾಹಿತ್ಯಕ್ಕೆ ಜನ್ಮ ನೀಡಿದ್ದೇ ಈ ಊರು   

ಯಳಂದೂರು: ರಾಜ್ಯದ ಪುಟ್ಟ ತಾಲ್ಲೂಕು ಕೇಂದ್ರವಾದ ಯಳಂದೂರು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಹಿರಿದಾದ ಸ್ಥಾನ ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ. ಕನ್ನಡ ನಾಡು, ನುಡಿ ಸಂಸ್ಕೃತಿಯ ಬೆಳವಣಿಗೆಗೆ ಇಲ್ಲಿನವರ ಕೊಡುಗೆ ರಾಷ್ಟ್ರದ್ಯಂತ ವ್ಯಾಪಿಸಿದೆ. ಸಾಹಿತ್ಯ, ಗ್ರಾಮೀಣ ಸೊಗಡು, ಜನಪದ, ಆರ್ಥಿಕತೆ, ಪತ್ರಿಕೋದ್ಯಮ, ಸಾಮಾಜ ಸೇವೆ, ಚಿತ್ರರಂಗದಲ್ಲಿ ಇಲ್ಲಿನವರ ಕೊಡುಗೆ ಅಪಾರ.

ಶನಿವಾರ ನಡೆಯುವ ಯಳಂದೂರು ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಲ್ಲಿಯ ನೆಲದ ಸೊಗಡಿನ ಸಾಹಿತಿ ಎಂ.ಎನ್ ವ್ಯಾಸರಾವ್ ಆಯ್ಕೆಯಾಗಿರುವುದು  ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಹಾಗೂ ಕನ್ನಡಿಗರಿಗೆ   ಸಂತಸವನ್ನು ಉಂಟುಮಾಡಿದೆ.  ಚಾರಿತ್ರಿಕ ಇತಿಹಾಸವಿರುವ ತಾಲ್ಲೂಕು ಸಮ್ಮೇಳನದ ಬಗ್ಗೆ ತಮ್ಮ   ನೆನಪುಗಳನ್ನು `ಪ್ರಜಾವಾಣಿ~ಯೊಡನೆ ಹಂಚಿಕೊಂಡಿದ್ದಾರೆ.

ಇಲ್ಲಿ ಭಾಷೆಗೆ, ಭಾವನೆಗೆ ಜೀವಂತಿಕೆ ಇದೆ. ಇನ್ನೂ ಗ್ರಾಮೀಣ ಸಂಸ್ಕೃತಿಯ ಪ್ರಭಾವ ಉಳಿದುಕೊಂಡಿದೆ. ಇಲ್ಲಿನವರಿಗೆ ಆಧುನಿಕ `ಟೆಕ್ನಾಲಜಿ~ಯ ಪ್ರಭಾವ ಹಾಗೂ `ಹೈಟೆಕ್~ ಬುದ್ದಿವಂತಿಕೆ ಆಗದಂತೆ ತಡೆಯುವ ಜವಬ್ದಾರಿ ನಮ್ಮೆಲ್ಲರದಾಗಬೇಕು ಎನ್ನುತ್ತಾರೆ ವ್ಯಾಸರಾವ್.

ಯಳಂದೂರಿನ ಸಮ್ಮೇಳನಾಧ್ಯಕ್ಷರಾಗಿರುವುದರ ಬಗ್ಗೆ?
`ಇದು ನನಗೆ ದೊರೆತ ದೊಡ್ಡ ಗೌರವ. ಕನ್ನಡ ನಂಬಿರುವ, ಕನ್ನಡತನಕ್ಕಾಗಿ ತುಡಿಯುವ ವ್ಯಕ್ತಿಗೆ ಸುಂದರ ಗ್ರಾಮೀಣ ಸೊಗಡಿನ ಜನಸಾಮಾನ್ಯರಂತೆ ನನಗೆ ಸಂಭ್ರಮವಾಗಿದೆ. ನನ್ನ ತಾಯಿ ಯಳಂದೂರಿನವರು. ನನ್ನ ಸಾಹಿತ್ಯ ರಚನೆಗೆ ಸೆಳೆತವೂ  ಇಲ್ಲಿಂದಲೇ ಆಯಿತು. ಒಮ್ಮೆ ಹೊನ್ನುಹೊಳೆಯಲ್ಲಿ ಮುಳುಗಿದ್ದಾಗ ಪುನರ್ಜನ್ಮ ನೀಡಿದವರೂ ಇಲ್ಲಿನವರು.

ತಾಲ್ಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮದ ಔಚಿತ್ಯ ಏನು?
ಕನ್ನಡತನ ಕನ್ನಡಿಗರ ಹಕ್ಕು. ಭಾಷೆಯಿಂದ ಕನ್ನಡ ಕಹಳೆ ಕೇಳಿಸಲು ಇಂತಹ ಕಾರ್ಯಕ್ರಮಗಳಾಗಬೇಕು. ಇದನ್ನು ಪರಿಷತ್ತುಗಳು ಮಾಡುತ್ತಿವೆ.

ಕನ್ನಡದ ಇಂದಿನ ಸ್ಥಿತಿ...

ಕನ್ನಡ ಭಾಷೆ ಚಿಂತಾಜನಕ ಸ್ಥಿತಿಯಲ್ಲಿದೆ. ಇದು ಗ್ರಾಮೀಣರ ಜೀವನಾಡಿ. ನಗರೀಕರಣವಾದಂತೆಲ್ಲಾ ಭಾಷೆ ಬೆಸುಗೆ ಶಿಥಿಲಗೂಳ್ಳುತ್ತಿದೆ. ಮಗುವಿನ ಭಾವನೆ, ಚಿಂತನೆ ಮೂಡಿಸುವಲ್ಲಿ ಮಾತ್ರ ಮಾತೃ ಭಾಷೆಗೆ ಸಾಧ್ಯವಾಗುವ ಬಗ್ಗೆ ಪೋಷಕರು ಚಿಂತಿಸಬೇಕು.

ಭಾಷಾಭಿಮಾನ ವೃದ್ಧಿಸಲು ನಿಮ್ಮ ಸಲಹೆ ಏನು?

ಕನ್ನಡ ಅನಿವಾರ್ಯ. ರಾಜ್ಯದಲ್ಲಿ ಯಾವುದೇ ಭಾಷೆ ಕನ್ನಡದ ನಂತರದ ಸಹೋದರ ಭಾಷೆಯಾಗಬೇಕು. ಉಳಿದವು ಕನ್ನಡದ ಸಾಮಂತ ಭಾಷೆಯಂತಿರಬೇಕು. ಕನ್ನಡಿಗರ ಭುವನೇಶ್ವರಿ ಭಾಷೆಗಳ ರಾಣಿಯಾಗಬೇಕು.

ಕನ್ನಡ ಶಾಲೆ ಮುಚ್ಚುತ್ತಿರುವ ಕುರಿತು ಏನು ಹೇಳುತ್ತೀರಿ?

ಸಹಿಸುವುದಿಲ್ಲ. ಆದರೆ, ಮುಖ್ಯಮಂತ್ರಿಗಳು ಮುಚ್ಚುವುದಿಲ್ಲ ಎಂದು ಘೋಷಿಸಿದ್ದಾರೆ. ಕನ್ನಡದ ಮಖೇನ ಇತರ ಭಾಷೆಗಳ ಕಲಿಕೆಗೆ ಆದ್ಯತೆ ಹಾಗೂ ನಮ್ಮ ಭಾಷೆಯ ಮೂಲಕ ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡಬೇಕು.

ಇಂಗ್ಲಿಷ್ ಅನಿವಾರ್ಯವೆ?

ಇಲ್ಲ. ಮಕ್ಕಳು ಮನೆಯ ಹೊರಗೆ ಹಲವು ಭಾಷೆ ಕಲಿಯಲು ಮುಕ್ತ ಅವಕಾಶ ಇದೆ. ಆದರೆ, ಕನ್ನಡ ಮನೆಯಿಂದಲೇ ಕಲಿಯಬೇಕು.

ಮಕ್ಕಳಲ್ಲಿ ಮಾತೃ ಭಾಷೆ ಬೆಳೆಸಲೂ ಸಲಹೆ...

ಕನ್ನಡ ಕಲಿಕೆಗೆ ಸರ್ಕಾರ ಕಾರ್ಯ ತಂತ್ರ ರೂಪಿಸಬೇಕು. ಕನ್ನಡೇತರರು ಕರ್ನಾಟಕದ ಮಣ್ಣಿನ, ಜಲದ ಭಾಷೆಯ ಋಣ ತೀರಿಸಲೂ ನಮ್ಮ ಭಾಷೆ ಕಲಿಯುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT