ADVERTISEMENT

ನಿರುಪಯುಕ್ತ ಓವರ್‌ಹೆಡ್ ಟ್ಯಾಂಕ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 8:50 IST
Last Updated 17 ಫೆಬ್ರುವರಿ 2012, 8:50 IST

ಸಂತೇಮರಹಳ್ಳಿ: ಗ್ರಾಮಕ್ಕೆ ಕುಡಿ ಯುವ ನೀರು ಪೂರೈಸುತ್ತಿದ್ದ ಓವರ್ ಹೆಡ್ ಟ್ಯಾಂಕ್‌ಗೆ ನೀರು ತುಂಬಿಸದ ಪರಿಣಾಮ ತುಕ್ಕು ಹಿಡಿದು ಬೀಳುವ ಹಂತ ತಲುಪಿ ಅಪಾಯವನ್ನು ಆಹ್ವಾನಿಸುತ್ತಿದೆ.

ಹಳೇ ಸಂತೆಮೈದಾನದಲ್ಲಿ ಒಂದೆ ಟ್ಯಾಂಕ್ ಇದ್ದು, ಸಂತೆಗೆ ಬರುವ ಜನರಿಗೆ ಸೇರಿದಂತೆ ಗ್ರಾಮದ ಎಲ್ಲ ಬಡಾವಣೆಗಳಿಗೂ ಸಂಪೂರ್ಣವಾಗಿ ಕುಡಿಯುವ ನೀರು ಒದಗಿಸುತ್ತಿತ್ತು.

ಈ ಟ್ಯಾಂಕ್ 5 ವರ್ಷದ ಹಿಂದೆ ದುಃಸ್ಥಿತಿಗೆ ತಲುಪಿತ್ತು. ದುರಸ್ತಿ ಕಾರ್ಯಕ್ಕೆ ಪಂಚಾಯಿತಿ ನಿರ್ಲಕ್ಷ್ಯ ಮಾಡಿದ ಕಾರಣ ಈಗ ಕುಸಿದು ಬೀಳುವ ಹಂತ ತಲುಪಿದೆ. ಟ್ಯಾಂಕ್ ಸಂಪೂರ್ಣ ಕಬ್ಬಿಣದಿಂದ ನಿರ್ಮಾಣ ಗೊಂಡಿದ್ದು, 20 ಸಾವಿರ ಲೀ ವರೆಗೆ ನೀರು ಶೇಖರಣೆಗೊಳ್ಳುವ ಸಾಮರ್ಥ್ಯ ಹೊಂದಿದೆ.

ಅನೇಕ ವರ್ಷಗಳ ಹಿಂದೆ ಈ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ನೀರಿಗೆ ಅಭಾವ ಉಂಟಾಗಿ ಸಂತೆಗೆ ಬಂದ ಜನರು ಹಣ ಕೊಟ್ಟು ನೀರು ಖರೀದಿಸಿ ಕುಡಿಯುತ್ತಿದ್ದರು. ಮೈಸೂರಿನ ಡಿ.ಬನುಮಯ್ಯ ಎಂಬು ವವರು ಸ್ಥಳಕ್ಕೆ ಭೇಟಿ ನೀಡಿದಾಗ ಸಮಸ್ಯೆಯನ್ನು ಅರಿತು 1920ರಲ್ಲಿ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟರು. ಅಂದಿನಿಂದ ಇಲ್ಲಿಯವರೆಗೂ ಗ್ರಾಮ ಮತ್ತು ಸಂತೆಗೆ ಬಂದ ಜನರಿಗೆ ಬಾಯಾರಿಕೆ ನೀಗಿಸುತ್ತಿತ್ತು.

ಟ್ಯಾಂಕ್ ಸಮೀಪದಲ್ಲಿಯೇ ಹಿರಿಯ ಪ್ರಾಥಮಿಕ ಶಾಲೆ, ಜೆಎಸ್‌ಎಸ್ ಶಾಲೆ, ಪದವಿ ಪೂರ್ವ ಕಾಲೇಜು, ಮಹದೇಶ್ವರ ಸ್ವಾಮಿ ದೇವಸ್ಥಾನವಿದೆ. ಟ್ಯಾಂಕ್ ಸನಿಹದಲ್ಲಿ ಶಾಲಾ ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ    ತೊಡಗುತ್ತಾರೆ. ಟ್ಯಾಂಕ್ ದುರಸ್ತಿ ನಿರ್ಲಕ್ಷ್ಯ ವಹಿಸಿರುವುದರಿಂದ ಮಕ್ಕಳಿಗೆ ಅಪಾಯ ಉಂಟಾಗಬಹುದು ಎಂದು  ಪೋಷಕರು ಹೇಳುತ್ತಾರೆ.

ಟ್ಯಾಂಕ್ ದುರಸ್ತಿಗೊಳಿಸಿ ಪ್ರತ್ಯೇಕ ಕೊಳವೆ ಬಾವಿ ಕೊರೆಯಿಸಿ ಹೆಚ್ಚು ಜನ ಸೇರುವ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ನೀರಿನ ಸಮಸ್ಯೆ ಇರುವ ಬಡಾವಣೆಗೆ ಕುಡಿಯುವ ನೀರು ಒದಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಮುಖಂಡ ಜಯಶಂಕರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.