ಕೊಳ್ಳೇಗಾಲ: ‘ಜೀವಜಲ ಸಮರ್ಪಕ ಬಳಕೆಗೆ ರೈತರು ಹೆಚ್ಚು ಗಮನ ನೀಡಬೇಕು’ ಎಂದು ಶಾಸಕ ಆರ್. ನರೇಂದ್ರ ಹೇಳಿದರು.
ತಾಲ್ಲೂಕಿನ ಕೊತ್ತನೂರು ಮತ್ತು ರಾಮನಗುಡ್ಡೆ ಕೆರೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಯನ್ನು ಈಚೆಗೆ ನೆರೆವೇರಿಸಿ ಅವರು ಮಾತನಾಡಿದರು.
ಹನೂರು ವ್ಯಾಪ್ತಿಯ ಜನತೆಗೆ ಸಮರ್ಪಕ ನೀರು ಪೂರೈಸುವ ಉದ್ದೇಶದಿಂದ ವಿವಿಧ ಯೋಜನೆಗಳಿಂದ ಕೋಟ್ಯಂತರ ಹಣ ಖರ್ಚುಮಾಡಲಾಗುತ್ತಿದೆ. ಆದರೆ, ಈ ಭಾಗದ ಕೆಲವು ಗ್ರಾಮಗಳಲ್ಲಿ ಅಂತರ್ಜಲ ತೀವ್ರ ಕುಸಿತದಿಂದ ನೀರಿನ ಯೋಜನೆಗಳು ವ್ಯರ್ಥವಾಗುತ್ತಿವೆ. ರೈತರು ನೀರಿನ ಮಿತ ಬಳಕೆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಕೊತ್ತನೂರು ಕೆರೆಗೆ ಕಬಿನಿ ಜಲಾಶಯದ ಮೂಲಕ ನೀರು ಸಂಗ್ರಹಿಸಿದ್ದನ್ನು ಈ ಭಾಗದ ರೈತರು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಕೆರೆಯನ್ನು ₨ 48.50 ಲಕ್ಷ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರಾಮನಗುಡ್ಡೆ ಕೆರೆಯನ್ನು ₨ 82.50 ಲಕ್ಷ ಅಂದಾಜು ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಜಿ.ಪಂ. ಸದಸ್ಯ ಡಿ. ದೇವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ತಮ್ಮಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಸಣ್ಣ ನೀರಾವರಿ ಇಲಾಖೆ ಎಇಇ ಶಿವಮಲ್ಲು, ಎಇ ಬಸವರಾಜು, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದೇಗೌಡ, ಕೆಂಪಯ್ಯ, ಚಿಕ್ಕಣ್ಣ, ಮುಖಂಡ ದೊರೆಸ್ವಾಮಿ, ಮಾರಕುಟ್ಟಿಗೌಡ, ಯಾಲಕ್ಕೀಗೌಡ, ರಂಗಸ್ವಾಮಿ, ಗುತ್ತಿಗೆದಾರ ನಟರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.