ಗುಂಡ್ಲುಪೇಟೆ: ಜಗತ್ತಿನಾದ್ಯಂತ ಉಲ್ಬಣವಾಗುತ್ತಿರುವ ಅನೇಕ ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸಾ ಪದ್ಧತಿಯೇ ರಾಮಬಾಣ ಎಂದು ಪಡಗೂರು ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಆಯುರ್ವೇದ ವೈದ್ಯೆ ಕೋಕಿಲಾ ಶಿವನಂಜಪ್ಪ ಅವರ ಆಯುರ್ವೇದ ಪದ್ಧತಿಯ ಅಕ್ಯುಪಂಕ್ಚರ್ ಚಿಕಿತ್ಸಾ ವಿಧಾನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯ ಹಳೆಯ ಜೀವನ ಪದ್ಧತಿಯನ್ನು ಮರೆತು ಹೊಸ ಜೀವನ ಶೈಲಿಗೆ ಹೊಂದಿಕೊಂಡಂತೆ ಹೊಸ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಕರ್ತವ್ಯದ ಕಡೆಗೆ ಕೊಡುವ ಹೆಚ್ಚಿನ ಆಸಕ್ತಿಯನ್ನು ತಮ್ಮ ಆರೋಗ್ಯದ ಕಡೆ ನೀಡದಿರುವ ಕಾರಣ ಇಂದು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ವಿಷಾದಕರ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಅಲೋಪಥಿ ಚಿಕಿತ್ಸೆಯ ಮೊರೆ ಹೋಗುತಿದ್ದಾರೆ. ಹಿಂದಿನ ಕಾಲದಲ್ಲಿ ಪರಿಸರದಲ್ಲಿ ಸಿಗುವ ಮತ್ತು ಮಾನವನ ದೇಹದಲ್ಲಿರುವ ರೋಗನಿರೋದಕ ಅಂಶಗಳನ್ನು ಗುರ್ತಿಸಿ ಅವುಗಳಿಂದ ಕಾಯಿಲೆ ಗುಣಪಡಿಸುತ್ತಿದ್ದರು. ಆಯುರ್ವೇದ ಚಿಕಿತ್ಸಾ ಪದ್ಧತಿ ನಿಧಾನ ಗತಿಯಾದರೂ ರೋಗವನ್ನು ಪರಿಪೂರ್ಣವಾಗಿ ತೊಡೆದು ಹಾಕುವ ಮೂಲಕ ಉತ್ತಮ ಅರೋಗ್ಯವನ್ನು ನೀಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಸಿ.ಎ.ರವಿ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವ ಪದ್ಧತಿ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಪಿ.ಮಹದೇವಪ್ಪ, ತೋಂಟದಾರ್ಯ ಸ್ವಾಮಿ, ಮೂಡಗೂರು ಮಠದ ಉದ್ದಾನ ಸ್ವಾಮಿ, ದೇಪಾಪುರ ಮಠದ ಬಸವಣ್ಣ ಸ್ವಾಮಿ, ಕೋತ್ತಲವಾಡಿ ಮಠ ಗುರುಸ್ವಾಮೀಜಿ, ಕೆ.ವಿ.ಅತಿತೇಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.