ADVERTISEMENT

‘ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯಿರಿ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 8:59 IST
Last Updated 27 ಡಿಸೆಂಬರ್ 2017, 8:59 IST

ಕೊಳ್ಳೇಗಾಲ: ‘ಯಾವುದೇ ತಾರತಮ್ಯ, ಆಕ್ಷೇಪಣೆ ಹಾಗೂ ವೈಮನಸ್ಸಿಲ್ಲದೆ ಪಕ್ಷವನ್ನು ಬೆಳೆಸಬೇಕು ಹಾಗೂ ಗೌರವಿಸಬೇಕು’ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಸಲಹೆ ನೀಡಿದರು.

ನಗರದ ಬಸವೇಶ್ವರ ನಗರದಲ್ಲಿ ಮಂಗಳವಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯಬೇಕು. ಆಗ ಪ್ರತಿಫಲ ದೊರಕುವುದು ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಹಿಂದೂ ಸಂಘಟನೆಗಳ ಹಲವು ಕಾರ್ಯಕರ್ತರ ಹತ್ಯೆಯಾದರೂ ಅದರ ಬಗ್ಗೆ ತುಟಿ ಬಿಚ್ಚದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿಯಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನರೇಂದ್ರ ಮೋದಿ ಅವರು ನೀಡಿರುವ ಹಲವು ಜನಪರ ಯೋಜನೆಗಳನ್ನು ನಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ರಾಜ್ಯದ ಅಭಿವೃದ್ಧಿ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಟೀಕಿಸಿದರು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ‘ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಜಯಭೇರಿ ಬಾರಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕಿ ಪರಿಮಳ ನಾಗಪ್ಪ, ಜಿ.ಪಂ. ಸದಸ್ಯ ಕಮಲ್, ನಗರಸಭೆ ಸದಸ್ಯ ಗಿರಿ, ಸುಮಾ, ಬಿಜೆಪಿ ನಗರ ಮಂಡಳ ಅಧ್ಯಕ್ಷ ರಮೇಶ್, ತಾ.ಪಂ. ಸದಸ್ಯ ಕೃಷ್ಣ, ಮರಿಸ್ವಾಮಿ, ಶಾರದಾಂಬ , ಪಲ್ಲವಿ, ಶಿವಮ್ಮ, ಕವಿತಾ, ಬಿಜೆಪಿ ಮುಖಂಡರಾದ ಚಿನ್ನಸ್ವಾಮಿಮಾಳಿಗೆ, ಬೂದಿತಿಟ್ಟು ಶಿವಕುಮಾರ್, ನಾರಾಯಣ್, ಮಹದೇವಸ್ವಾಮಿ, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.