ADVERTISEMENT

ಬ್ಯಾಂಕ್‌ಗೆ ದಾಂಗುಡಿ ಇಟ್ಟ ಜನ

ಹಂಗಳ: ಗುಮಾಸ್ತನಿಂದ ಹಣ ದುರ್ಬಳಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 6:17 IST
Last Updated 5 ಅಕ್ಟೋಬರ್ 2017, 6:17 IST

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಗುಮಾಸ್ತ ಕುಮಾರ್ ಎಂಬಾತ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಬಯಲಾದ ಬಳಿಕ, ಬುಧವಾರವೂ ಜನರು ಬ್ಯಾಂಕಿಗೆ ಬಂದು ತಮ್ಮ ಖಾತೆಯ ಹಣವನ್ನು ಪರಿಶೀಲಿಸಿದರು.

ಬೆಳಿಗ್ಗೆಯೇ ಬ್ಯಾಂಕ್‌ನ ಕಚೇರಿಗೆ ದೌಡಾಯಿಸಿದ ಜನರು ತಮ್ಮ ಖಾತೆಯಲ್ಲಿರುವ ಮೊತ್ತವನ್ನು ಖಚಿತಪಡಿಸಿಕೊಂಡರು.

‘ಗುಮಾಸ್ತ ಕುಮಾರ್ ಅವರನ್ನು ನಂಬಿ ಹಣವನ್ನು ಖಾತೆಗೆ ಜಮಾ ಮಾಡಿರುವವರಿಗೆ ಮಾತ್ರ ಮೋಸವಾಗಿದೆ. ನೇರವಾಗಿ ಬ್ಯಾಂಕಿನಲ್ಲಿ ವ್ಯವಹಾರ ಮಾಡಿದವರಿಗೆ ಯಾವ ತೊಂದರೆಯಾಗಿಲ್ಲ’ ಎಂದು ಬ್ಯಾಂಕ್‌ನ ಸಿಬ್ಬಂದಿ ತಿಳಿಸಿದರು.

ADVERTISEMENT

ಮಾಧ್ಯಮದವರಿಗೆ ತಿಳಿಸಿದರೆ ಮತ್ತೆ ಹಣ ವಾಪಸ್ ಸಿಗುವುದಿಲ್ಲ ಎಂಬ ಭಯದಿಂದ ಕೆಲವರು ಹಣ ಕಳೆದುಕೊಂಡಿದ್ದರು ಸಹ ಹೇಳಿಕೊಳ್ಳಲು ಮುಂದೆ ಬರಲಿಲ್ಲ.

‘ಗೆಳೆತನದಿಂದ ಕುಮಾರ್‌ನನ್ನು ನಂಬಿ ವ್ಯವಹಾರ ಮಾಡುತ್ತಿದ್ದೆ. ಆದರೆ ಆತ ಹಣವನ್ನೇ ಜಮಾವಣೆ ಮಾಡಿಲ್ಲ. ಪಾಸ್ ಪುಸ್ತಕದಲ್ಲಿ ಮಾತ್ರ ದಾಖಲಾಗಿದೆ. ಬ್ಯಾಂಕ್ ಸೀಲ್ ಸಮೇತ ಸಹಿ ಮಾಡಿದ್ದಾರೆ. ಆದರೆ, ಖಾತೆಯಲ್ಲಿ ಹಣವೇ ಇಲ್ಲ. ನನ್ನ ಫೋನ್ ನಂಬರ್‌ಗೆ ಯಾವುದೇ ಮಾಹಿತಿ ಸಹ ಬರುತ್ತಿರಲಿಲ್ಲ. ಅವನನ್ನು ನಂಬಿ ಮೋಸಹೋದೆ’ ಎಂದು ಹಣ ಕಳೆದುಕೊಂಡ ವ್ಯಕ್ತಿಯೊಬ್ಬರು ತಿಳಿಸಿದರು.

ಬ್ಯಾಂಕಿನಲ್ಲಿ ಕಂಪ್ಯೂಟರ್‌ಗಳು ಸೌಲಭ್ಯಗಳೇ ಇಲ್ಲ. ಬ್ಯಾಂಕ್‌ ವ್ಯವಹಾರದ ಎಲ್ಲ ವಿವರಗಳನ್ನು ಕೈಬರಹದಲ್ಲಿಯೇ ದಾಖಲಿಸ ಲಾಗುತ್ತಿತ್ತು.ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಹಣ ತೆಗೆದುಕೊಳ್ಳುವಾಗ, ಜಮಾವಣೆ ಮಾಡುವಾಗ ಆನ್‌ಲೈನ್ ಮುಖಾಂತರ ಸಂದೇಶ ಬರುವಂತಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ದೂರಿದರು.

ಹಣ ಮತ್ತು ಗಿರವಿಗೆ ಇಟ್ಟು ಚಿನ್ನ ಕಳೆದುಕೊಂಡವರ ಕುರಿತು ಊಹಾಪೋಹದ ಚರ್ಚೆಗಳು ಜನರ ನಡುವೆ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.