ADVERTISEMENT

ಭರವಸೆಗಳ ಸುರಿಮಳೆಗೈದ ಅಮಿತ್‌ ಶಾ

ಚಾಮರಾಜನಗರದಲ್ಲಿ ನಡೆದ ಪರಿಶಿಷ್ಟ ಪಂಗಡದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:05 IST
Last Updated 31 ಮಾರ್ಚ್ 2018, 7:05 IST

ಚಾಮರಾಜನಗರ: ಕೇಂದ್ರ ಸರ್ಕಾರ ಬಿದಿರನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸಿದೆ. ಇದರಿಂದ ಬಿದಿರನ್ನು ಯಾರು ಬೇಕಾದರೂ ಕತ್ತರಿಸಿ, ಮಾರಾಟ ಮಾಡಬಹುದಾದ ಅವಕಾಶ ಇದೆ. ಆದರೆ, ಈ ನಿರ್ಧಾರಕ್ಕೆ ವ್ಯಾಪಕ ಪ್ರಚಾರ ಸಿಕ್ಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.ಇಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಪಂಗಡದ ಸಮಾವೇಶದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ₹ 100 ಕೋಟಿ ವೆಚ್ಚದಲ್ಲಿ ‘ಬಿದಿರು ಬೆಳೆ ಸಂಶೋಧನಾ ಕೇಂದ್ರ’ ವನ್ನು ಚಾಮರಾಜನಗರದಲ್ಲಿ ಸ್ಥಾಪಿಸಲಾ ಗುವುದು ಎಂದು ಭರವಸೆ ನೀಡಿದರು.

ಮದಕರಿನಾಯಕ ಅವರ ಸ್ಮಾರಕವನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದಕರಿ ನಾಯಕ ಅವರ ಸ್ಮರಣೆಯಾಗುವುದಿಲ್ಲ. ಬದಲಿಗೆ ಅವರನ್ನು ಕೊಂದ ಹೈದರಾಲಿ ಪುತ್ರ ಟಿಪ್ಪುವಿನ ನೆನಪಾಗುತ್ತದೆ. ಅದಕ್ಕಾಗಿಯೇ ಅವರು ಮದಕರಿ ನಾಯಕ ಅವರ ಜನ್ಮ ದಿನಾಚರಣೆ ಮಾಡದೇ ಟಿಪ್ಪುವಿನ ಜನ್ಮ ದಿನಾಚರಣೆ ಮಾಡುತ್ತಾರೆ ಎಂದು ಚಾಟಿ ಬೀಸಿದರು.

ಅಹಿಂದಕ್ಕೆ ಸಿದ್ದರಾಮಯ್ಯ ಅವರಿಂದ ದ್ರೋಹ: ‘ನಾನು ಅಹಿಂದ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅಕ್ಷರಶಃ ಅಹಿಂದ ಸಮುದಾಯಕ್ಕೆ ದ್ರೋಹ ಎಸಗಿದ್ದಾರೆ’ ಎಂದು ಅಮಿತ್‌ ಶಾ  ಆರೋಪಿಸಿದರು.ಹಿಂದುಳಿದ ವರ್ಗಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ಮಾನ ನೀಡುವ ಕೇಂದ್ರ ಸರ್ಕಾರದ ಮಸೂದೆಯಿಂದ ಅಹಿಂದ ಸಮುದಾ ಯಕ್ಕೆ ಅನುಕೂಲವಾಗುತ್ತಿತ್ತು. ಆದರೆ, ಸಿದ್ದರಾಮಯ್ಯ ಮಸೂದೆಯ ಮಹತ್ವ ವನ್ನು ತಮ್ಮ ಪಕ್ಷದ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಿಲ್ಲ. ಇದರಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಬೆಂಬಲ ನೀಡದೇ ಇರುವುದರಿಂದ ಮಸೂದೆ ಜಾರಿಯಾಗಲಿಲ್ಲ ಎಂದರು.ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ವಿರೋಧಿ ಮಾತ್ರ ಅಲ್ಲ. ಅವರು ಪರಿಶಿಷ್ಟ ಜಾತಿ, ಪಂಗಡಗಳ ವಿರೋಧಿಯೂ ಆಗಿದ್ದಾರೆ ಎಂದು ಅವರು ಹರಿಹಾಯ್ದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಸಂಖ್ಯೆಯಲ್ಲಿ ಹೆಚ್ಚಿದ್ದರೂ ಅವರ ವಿದ್ಯಾರ್ಥಿ ವೇತನಕ್ಕೆ ಸಿದ್ದರಾಮಯ್ಯ ತೆಗೆದಿರಿಸಿದ್ದು ಕೇವಲ ₹ 123 ಕೋಟಿ ಮಾತ್ರ. ಸಂಖ್ಯೆಯಲ್ಲಿ ಕಡಿಮೆ ಇರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅವರು ತೆಗೆದಿರಿಸಿದ್ದು ₹ 513 ಕೋಟಿ. ಈ ತಾರತಮ್ಯ ಸರಿಯೇ ಎಂದು ಅವರು ಪ್ರಶ್ನಿಸಿದರು.ನಾಯಕ ಮತ್ತು ಪರಿವಾರ ಸಮುದಾಯಗಳನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರಿಂದ ಈ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಸಿಗುವಂತಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.