ಯಳಂದೂರು: ಸತತವಾಗಿ ಮಳೆ ಸುರಿದಿದ್ದರಿಂದ ತಾಲ್ಲೂಕಿನ ಹಲವು ಗ್ರಾಮಗಳ ರಸ್ತೆಗಳು ಹದಗೆಟ್ಟಿವೆ. ತಾಲ್ಲೂಕಿನ ಬಹತೇಕ ಗ್ರಾಮೀಣ ಭಾಗದ ರಸ್ತೆಗಳಲ್ಲಿ ತಗ್ಗು ಬಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಕೆಲ ಪ್ರದೇಶಗಳ ಕಿರು ಸೇತುವೆಗಳ ಬಳಿ ಡಾಂಬರು ಕಿತ್ತುಹೋಗಿದೆ. ಇದರಿಂದಾಗಿ ಕೃಷಿಕರಿಗೂ ತೊಂದರೆಯಾಗಿದೆ.
‘ರಾತ್ರಿ ಸಂಚರಿಸುವುದು ದುಸ್ತರವಾಗಿದೆ. ಕುಸಿದ ರಸ್ತೆಗಳ ನಡುವೆ ಮುಳ್ಳು ಇಲ್ಲವೆ ಕಲ್ಲನ್ನು ಇಟ್ಟು ಅಪಾಯದ ಮನವರಿಕೆ ಮಾಡಿಕೊಡಬೇಕಿದೆ. ಮಳೆ ನಿಂತು ಹಲವು ದಿನ ಕಳೆದರೂ ರಸ್ತೆ ಸರಿಪಡಿಸುವತ್ತಾ ಯಾರು ಆಸ್ಥೆ ವಹಿಸಿಲ್ಲ. ಇದರಿಂದ ಹೊನ್ನೂರು ಮತ್ತು ಯಳಂದೂರು ಮಾರ್ಗದ ರಸ್ತೆಯ ನಡುವೆ ವಾಹನ ಸವಾರರು ರಾತ್ರಿ ಆಯ ತಪ್ಪಿ ಬಿದ್ದಿದ್ದಾರೆ’ ಎನ್ನುತ್ತಾರೆ ಯಳಂದೂರಿನ ಬಲ್ಲಶೆಟ್ಟಿ.
ಬಹಳಷ್ಟು ಮುಖ್ಯ ರಸ್ತೆಗಳ ನಡುವೆ ಕುಳಿ ಬಿದ್ದಿದೆ. ಹೀಗಾಗಿ, ಕೃಷಿ ಜಮೀನುಗಳಿಗೆ ಪರಿಕರಗಳನ್ನು ಸಾಗಿಸುವುದು ಗ್ರಾಮೀಣ ಜನರಿಗೆ ಕಷ್ಟವಾಗುತ್ತಿದೆ. ಗೌಡಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕೆಸರು ಮಯವಾಗಿದೆ. ಇಲ್ಲಿ ನೀರಿನ ಹರಿವು ಹೆಚ್ಚಿ ದೊಡ್ಡ ಹಳ್ಳಗಳು ಬಿದ್ದಿವೆ ಎನ್ನುತ್ತಾರೆ ಕೃಷಿಕ ಸುರೇಶ್ ಕುಮಾರ್.
ರಾಸುಗಳ ಕಾಲು ರಸ್ತೆ ಗುಂಡಿಯಲ್ಲಿ ಸಿಲುಕಿ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.