ADVERTISEMENT

ಯುವಜನರಲ್ಲಿ ದೇಶಾಭಿಮಾನ ಬೆಳೆಸಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 8:35 IST
Last Updated 9 ಜುಲೈ 2012, 8:35 IST

ಚಾಮರಾಜನಗರ: `ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶದಡಿ ಯುವಜನರನ್ನು ಸಂಘಟಿಸುವ ಮೂಲಕ ಅವರಲ್ಲಿ ದೇಶಾಭಿಮಾನ ಬೆಳೆಸಬೇಕಿದೆ~ ಎಂದು ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರಾಮಚಂದ್ರ ಹೇಳಿದರು.

ನಗರದ ಸರ್ಕಾರಿ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಈಚೆಗೆ ನಡೆದ ಜಿಲ್ಲಾ ಭಾರತ ಸೇವಾದಳದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಯುವಜನರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ರೂಪಿಸಬೇಕಿದೆ. ಅವರಲ್ಲಿ ಸಂಯಮ, ಧೈರ್ಯ, ತ್ಯಾಗ, ಸರಳತೆ, ತಾಳ್ಮೆ, ಸಹಕಾರ ಮನೋಭಾವದ ಗುಣ ಬೆಳೆಸಲು ಸೇವಾದಳ ಒತ್ತು ನೀಡುತ್ತಿದೆ.

ಜಾತೀಯತೆ ಭಾವನೆ ಹೋಗಲಾಡಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಭಾರತ ಸೇವಾದಳವು `ಹಿಂದೂಸ್ತಾನಿ ಸೇವಾದಳ~ ಎಂಬ ಹೆಸರಿನಲ್ಲಿ 1923ರ ವೇಳೆ ಗಾಂಧೀಜಿ ಅವರ ಆದೇಶದಂತೆ ಡಾ.ನಾ.ಸು. ಹರ್ಡೀಕರ್ ಅವರಿಂದ ಸ್ಥಾಪನೆಯಾಯಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಶಿಸ್ತಿನ ಸಂಘಟನೆಯಾಗಿ ಪಾಲ್ಗೊಂಡಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಶಿಸ್ತಿನ ಸ್ವಯಂ ಸೇವಕರು ಹಾಗೂ ಸತ್ಯಾಗ್ರಹಿಗಳನ್ನು ರೂಪಿಸಿ ಸ್ವಾತಂತ್ರ್ಯದ ಹೋರಾಟಕ್ಕೆ ಅಣಿಗೊಳಿಸಿದ ಹಿರಿಮೆ ಸೇವಾದಳಕ್ಕಿದೆ ಎಂದು ಹೇಳಿದರು.

ಸೇವಾದಳದ ಕೇಂದ್ರ ಸಮಿತಿ ಸದಸ್ಯ ಆರ್. ನಾಗರಾಜು ಮಾತನಾಡಿ, ಪ್ರತಿಯೊಂದು ಶಾಲೆ, ಕಾಲೇಜಿನಲ್ಲಿ ಸೇವಾದಳದ ಶಾಖೆ ತೆರೆಯಬೇಕಿದೆ. ತರಬೇತಿ ಪಡೆದ ಶಿಕ್ಷಕರು ಕನಿಷ್ಠ ಎರಡು ವಾರಕ್ಕೊಮ್ಮೆ ಎರಡು ಅವಧಿಯಲ್ಲಿ ಶಿಕ್ಷಣ ಇಲಾಖೆಯ ಆದೇಶ ಪಡೆದುಕೊಂಡು ಸೇವಾದಳದ ಮಕ್ಕಳಿಗೆ ಶಿಸ್ತು, ದೇಶಪ್ರೇಮದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಎಂ. ಶಿವಮೂರ್ತಿ, ಶಿಕ್ಷಣ ಬೋಧಕ ಕೆ. ಈರಯ್ಯ, ಮುಖ್ಯಶಿಕ್ಷಕ ಸಿದ್ದಬಸವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.