ADVERTISEMENT

ವರಮಹಾಲಕ್ಷ್ಮಿ ಸನ್ನಿಧಿಯಲ್ಲಿ ಹಬ್ಬದ ಕಳೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2011, 9:10 IST
Last Updated 11 ಆಗಸ್ಟ್ 2011, 9:10 IST
ವರಮಹಾಲಕ್ಷ್ಮಿ ಸನ್ನಿಧಿಯಲ್ಲಿ ಹಬ್ಬದ ಕಳೆ
ವರಮಹಾಲಕ್ಷ್ಮಿ ಸನ್ನಿಧಿಯಲ್ಲಿ ಹಬ್ಬದ ಕಳೆ   

ಯಳಂದೂರು: ಜಿಲ್ಲೆಯಲ್ಲಿಯೇ ವಿಶಿಷ್ಟ ಹಾಗೂ ಅಪರೂಪವಾದ `ವರಮಹಾಲಕ್ಷ್ಮಿ~ ದೇಗುಲ ತಾಲ್ಲೂಕಿನ ಮದ್ದೂರು ಗ್ರಾಮದಲ್ಲಿದೆ. ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದಂದು ವಿಶೇಷ ಪೂಜೆ ನಡೆಯುತ್ತದೆ.  ದೇಗುಲಕ್ಕೆ ನೂರಾರು ವರ್ಷದ ಇತಿಹಾಸವಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇಗುಲವನ್ನು ಇಲಾಖೆ ನಿರ್ಲಕ್ಷಿಸಿದೆ.

ಮುಂದಿನ ಶುಕ್ರವಾರ ನಡೆಯಲಿರುವ ವರಮಹಾಲಕ್ಷ್ಮಿ ಹಬ್ಬಕ್ಕೆ ದೇಗುಲ ಸಿದ್ಧಗೊಳಿಸಲಾಗುತ್ತಿದೆ. ಈ ಹಿಂದೆ ಇಲ್ಲಿ ರಥೋತ್ಸವವೂ ನಡೆಯುತ್ತಿತ್ತು. ಆದರೆ, ಈಗ ನಡೆಯುತ್ತಿಲ್ಲ. ಉತ್ಸವ ಮೂರ್ತಿಯ ಕೈ ಊನವಾಗಿರುವುದರಿಂದ 8 ವರ್ಷಗಳಿಂದ ಉತ್ಸವವೂ ನಡೆಯುತ್ತಿಲ್ಲ. ಎಂದು ದೇಗುಲದ ಅರ್ಚಕ ನಂಜುಂಡಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.

ಸುವರ್ಣಾವತಿ ನದಿಯ ದಡದಲ್ಲಿರುವ ಈ ದೇಗುಲ ಸುಂದರ ಪರಿಸರ ಹೊಂದಿದೆ. ಶಿವ ಹಾಗೂ ಲಕ್ಷ್ಮಿಯ ದೇಗುಲ ಒಂದೇ ಕಡೆ ಇರುವುದು ವಿಶೇಷ. ಬೂದಿತಿಟ್ಟು ಗ್ರಾಮಕ್ಕೆ ಸೇರಿರುವ ಮಹದೇಶ್ವರ ದೇಗುಲವನ್ನು ಗ್ರಾಮಸ್ಥರು ನವೀಕರಣಗೊಳಿಸಿ ಹೊಸ ಕಳೆ ನೀಡಿದ್ದಾರೆ.

ಲಕ್ಷ್ಮಿ ದೇಗುಲದ ಹೆಸರಿನಲ್ಲಿ 1.34 ಎಕರೆ ಜಮೀನು ಸಹ ಇದೆ. ವಾರ್ಷಿಕವಾಗಿ ಇದರಿಂದ ಬರುವ ಬೆಳೆಯ ಆದಾಯದಲ್ಲಿ ಇಲ್ಲಿನ ಅರ್ಚಕರಿಗೆ 2 ಸಾವಿರ ರೂ.ಗಳನ್ನು ಕೊಡಲಾಗುತ್ತಿದೆ. ಇದನ್ನು ಹೊರತುಪಡಿಸಿ ವರ್ಷಕ್ಕೆ 800 ರೂ. ಮಾತ್ರ ಸಂಬಳ ನೀಡಲಾಗುತ್ತಿದೆಾದರೆ ಅಭಿವೃದ್ಧಿ ಕಡೆ ಅಸ್ಥೆ ವಹಿಸಿಲ್ಲ.

ಗುರುವಾರದಿಂದ ವಿಶೇಷ ಪೂಜೆ: ಗುರುವಾರ ದೇಗುಲದಲ್ಲಿ ಗಣಪತಿ ಪ್ರಾರ್ಥನೆ, ಗಂಗೆ ಪೂಜೆ, ಅಷ್ಟ–ಮಹಾಲಕ್ಷ್ಮಿ, ನವಗ್ರಹ, ವರಮಹಾಲಕ್ಷ್ಮಿ ಅಮ್ಮನವರ ಕಳಶ ಸ್ಥಾಪನೆ ಅಷ್ಟಾವಧಾನ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಮಹಾಕುಂಭಾಷೇಕ, ಅಷ್ಟಮಹಾಲಕ್ಷ್ಮಿ ಹೋಮ, ನಡೆಯಲಿದೆ.

ಅಂದು ದೇವರಿಗೆ ಚಿನ್ನ ಬೆಳ್ಳಿಯ ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಹಾಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗುಳ್ಳಬೇಕು ಎಂದು ದೇವಸ್ಥಾನದ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.